ಧಾರವಾಡ prajakiran. com : ಸರಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಜೊತೆ ಮಾತುಕತೆ ನಡೆಸಬೇಕು.
ಮತ್ತು ನೌಕರರ ವರ್ಗಾವಣೆ, ವಜಾ, ಅಮಾನತ್ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ರಾಜ್ಯ ಉಚ್ಛನ್ಯಾಯಾಲಯ ಆದೇಶಿಸಿರುವುದನ್ನು ವಾಕರಸಾ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ಸ್ವಾಗತಿಸಿದ್ದಾರೆ.
೬ ನೇ ವೇತನ ಆಯೋಗದ ಸೌಲಭ್ಯ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಹಲವು ರೂಪಗಳ ಮೂಲಕ ಹೋರಾಟ ನಡೆಸಿದ್ದರು.
ಹೈಕೋರ್ಟ್ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಕೋವಿಡ್ ಸಂಕಷ್ಟದಲ್ಲಿ ಮುಷ್ಕರ ಮುಂದುವರೆಸಿ ಬಸ್ ಸೇವೆ ಲಭ್ಯವಾಗದೇ ಸಾರ್ವಜನಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕು.
ಸಾರ್ವಜನಿಕರ ಹಿತದೃಷ್ಠಿಯಿಂದ ಸೇವೆಗೆ ಮರಳುವಂತೆ ನೌಕರರಿಗೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆಯನ್ನು ಗೌರವಿಸಿ ನೌಕರರು ಕೂಡ ತಮ್ಮ ಕರ್ತವ್ಯಕ್ಕೆ ಮರಳಿದ್ದರು.
ಇದೀಗ ನ್ಯಾಯಾಲಯವು ಸಂಸ್ಥೆಯು ಕೆಲವು ನೌಕರರ ವಿರುದ್ಧ ಹೊರಡಿಸಿದ್ದ ವಜಾ, ಅಮಾನತ್ತು ಮತ್ತು ವರ್ಗಾವಣೆ ಆದೇಶಗಳನ್ನು ಕಾನೂನಾತ್ಮಕವಾಗಿ ಮೇಲ್ಮನವಿ ಸಲ್ಲಿಸಿ ಇತ್ಯರ್ಥಪಡಿಸಬೇಕು.
ಇತ್ತ ಸರಕಾರ ಕೂಡ ನೌಕರರ ಒಕ್ಕೂಟದ ಜೊತೆ ಕಾಲಮಿತಿಯೊಳಗೆ ಮಾತುಕತೆ ನಡೆಸಿ, ಮಾತುಕತೆಯ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ಒಂದು ವೇಳೆ ಸರಕಾರ ನೌಕರರ ಜೊತೆ ಸಮಾಲೋಚನೆ ನಡೆಸಲು ಸಾಧ್ಯ ಆಗದಿದ್ದರೆ ಮಧ್ಯಸ್ಥಿಕೆಗಾಗಿ ನ್ಯಾಯಾಧೀಶರನ್ನು ನೇಮಕ ಮಾಡುವ ಬಗ್ಗೆ ಅರ್ಜಿಯ ಮುಂದಿನ ವಿಚಾರಣೆ ವೇಳೆ ತೀರ್ಮಾನಿಸಲಾಗುವುದು ಎಂದು ಹೈಕೋರ್ಟ್ ಎಚ್ಚರಿಸಿರುವುದು ನೌಕರರ ಹಿತದೃಷ್ಠಿಯಿಂದ ಸಂತಸದ ಮತ್ತು ಸ್ವಾಗತಾರ್ಹ ಸಂಗತಿ.
ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕವಾಗಿ ನ್ಯಾಯಕ್ಕೆ ಸಂದ ಜಯ ಎಂದು ನೀರಲಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖಂಡರಿಗೆ ಧನ್ಯವಾದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಹಮ್ಮಿಕೊಂಡಿದ್ದ ಹೋರಾಟದ ನೇತೃತ್ವವಹಿಸಿದ್ದ ಮುಖಂಡರಿಗೆ ನೌಕರರರು ಧನ್ಯವಾದ ತಿಳಿಸಿದ್ದಾರೆ.
ನಿರಂತರ ೧೫ ದಿನಗಳವರೆಗೆ ಕರ ಪತ್ರ ಹಂಚಿಕೆ, ಧರಣಿ ಸತ್ಯಾಗ್ರಹ, ತಟ್ಟೆ ಲೋಟ ಬಾರಿಸುವುದು, ಶಾಸಕರಿಗೆ ಮನವಿ, ಶಾಂತಿಯುತ ಜೈಲ್ ಭರೋದಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೂಟದ ಮುಖಂಡರು ಮುನ್ನಡೆಸಿದರು.
ತಮ್ಮ ವೈಯುಕ್ತಿಕ ಸಮಯವನ್ನು ಹಗಲಿರುಳು ನೌಕರರ ಹೋರಾಟಕ್ಕೆ ಮುಡುಪಿಟ್ಟರು. ಈ ಮೂಲಕ ನೌಕರರ ಜೀವನಕ್ಕೆ ಆಸರೆಯಾಗುವ ಬೇಡಿಕೆಗಳ ಈಡೇರಿಕೆಗೆ ನಿರಂತರ ಶ್ರಮಿಸಿದ ಕೂಟದ ಗೌರವ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ಪಿ.ಎಚ್.ನೀರಲಕೇರಿ, ಶ್ರೀಶೈಲಗೌಡ ಕಮತರ, ರಾಜ್ಯ ಅಧ್ಯಕ್ಷ ಆರ್.ಚಂದ್ರಶೇಖರ ಅವರಿಗೆ ಪದಾಧಿಕಾರಿಗಳಾದ ಪುಂಡಲೀಕ ಕೋಲಕರ, ಬಸವರಾಜ ಕಮ್ಮಾರ, ಈಶ್ವರಗೌಡ ಚನ್ನಪ್ಪಗೌಡ, ವೀರೇಶ ಪೂಜಾರ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.