ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿಕೊಳ್ಳುತ್ತಿದೆ.
ಇದು ಸಿಬ್ಬಂದಿಯ ಯಡವಟ್ಟು ಅಥವಾ ಜಿಲ್ಲಾಡಳಿತದ ನಿಲ್ಯಕ್ಷ್ಯದ ಮುಂದುವರೆದ ಭಾಗವಾ ಎಂಬ ಪ್ರಶ್ನೆ ಅವಳಿ ನಗರದ ಜನತೆಗೆ ಕಾಡ ತೊಡಗಿದೆ.
ಅದರಲ್ಲೂ ವಿಶೇಷವಾಗಿ ಕರೋನಾ ಸೇನಾನಿಗಳು ಸಂಕಷ್ಟಗಳಿಗೆ ಹೆಚ್ಚಾಗಿ ಸಿಲುಕಿತ್ತಿದ್ದಾರೆ.
ಅವರ ಆತ್ಮ ವಿಶ್ವಾಸ ಹೆಚ್ಚಿಸಿ, ಅವರಿಗೆ ವಿಶೇಷ ಮುತುವರ್ಜಿ ತೋರಬೇಕಾದವರೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಇನ್ನಿತರ ಕರೋನಾ ಸೇನಾನಿಗಳನ್ನು ಹೆಣಗಾಡುವಂತೆ ಮಾಡುತ್ತಿದೆ.
ಹೌದು ಇದು ಅಚ್ಚರಿ ಹಾಗೂ ಆತಂಕದ ಸಂಗತಿಯಾದರೂ ನಂಬಲೇಬೇಕಾದ ಕಟು ಸತ್ಯ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಸಿಬ್ಬಂದಿ ಒಬ್ಬರ ವರದಿ ಒಂದೇ ದಿನ ತಪಾಸಣೆ ಮಾಡಿಕೊಂಡರೂ ಒಂದರಲ್ಲಿ ನೆಗೆಟಿವ್ ಮತ್ತೊಂದರಲ್ಲಿ ಪಾಸಿಟಿವ್ ಬಂದಿದೆ.
ಇದು ಸಿಬ್ಬಂದಿ ಹಾಗೂ ಸಿಬ್ಬಂದಿಯ ಕುಟುಂಬದವರಿಗೆ ಸಂಕಷ್ಟಕ್ಕೆ ಸಿಲುಕಿಸಿದೆ. ಒಂದೇ ದಿನ ಎರಡು ವರದಿ ಬೇರೆ ಬೇರೆ ಬರಲು ಹೇಗೆ ಸಾಧ್ಯ ಎಂಬುದು ಅವರ ಪೀಕಲಾಟವಾಗಿದೆ.
ಇದರಿಂದಾಗಿ ಆರೋಗ್ಯವಾಗಿದ್ದರೂ ಕೋವಿಡ್ ವಾರ್ಡ್ ನಲ್ಲಿ ದಾಖಲಾಗಿ, ನಾಲ್ಕು ದಿನ ಚಿಕಿತ್ಸೆ ಪಡೆದಿದ್ದಾರೆ.
ಈಗ ಅವರು ಅಲ್ಲಿಯೇ ಚಿಕಿತ್ಸೆ ಮುಂದುವರೆಸಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.
ಅವರು ಸರಕಾರಿ ನೌಕರರಾಗಿರುವುದರಿಂದ ಇದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ.
ಇದಲ್ಲದೆ ಈಗ ಹೇಗೂ ನಾಲ್ಕು ದಿನ ಕಳೆದಾಗಿದೆ. ಇನ್ನರೆಡು ದಿನಗಳಲ್ಲಿ ಬಿಡುಗಡೆಯಾಗುವ ವಿಶ್ವಾಸದಲ್ಲಿದ್ದಾರೆ.
ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿಯ ಪರಿಸ್ಥಿತಿಯೇ ಹೀಗಾದರೆ ಇನ್ನುಳಿದ ಜನಸಾಮಾನ್ಯರ ಪರಿಸ್ಥಿತಿಯೇನಾಗಿರಬಹುದು ಎಂಬ ಅನುಮಾನ ಈ ಪ್ರಕರಣ ಹುಟ್ಟು ಹಾಕಿದೆ.
ಈ ಬಗ್ಗೆ ಪ್ರಜಾಕಿರಣ.ಕಾಮ್ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನು ವಿಚಾರಿಸಿದರೆ, ಒಂದೊಂದು ಪ್ರಕರಣದಲ್ಲಿ ಹೀಗೆ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ಆದರೂ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗಿದ್ದರೆ ಆರೋಗ್ಯ ಇಲಾಖೆ ಯಡವಟ್ಟಿಗೆ ಕೊನೆಯೇ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ, ರ್ಯಾಪಿಡ್ ಟೆಸ್ಟ್ ಮಾಡಿಸಿಕೊಂಡವರ ವರದಿ ಪರಿಸ್ಥಿತಿಯೇನು.
ಸರಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಈ ಬಗ್ಗೆ ಮಾಹಿತಿಯಿದ್ದರೂ ಕೋವಿಡ್ ಪಾಸಿಟಿವ್ ಹಾಗೂ ನೆಗೆಟಿವಾ ಚೆಲ್ಲಾಟವಾಡುತ್ತಿರುವುದು ಏಕೆ ಎಂಬ ಯಕ್ಷ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.