ಧಾರವಾಡ prajakiran.com : ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಟ್ಟ ಕೊನೆಗೂ ನಿರೀಕ್ಷೆಯಂತೆ ಬಿಜೆಪಿ ಪಾಲಾಗಿದೆ.
ಅಧ್ಯಕ್ಷರಾಗಿ ಬಸವರಾಜ ಹೊಸೂರು, ಉಪಾಧ್ಯಕ್ಷರಾಗಿ ಕೃಷ್ಣ ಕೊಳ್ಳಾನಟ್ಟಿ ಆಯ್ಕೆಯಾಗಿದ್ದಾರೆ.
ಧಾರವಾಡ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಎರ್ಪಟ್ಟು ಅದು ಪ್ರತಿಷ್ಟೆಯಾಗಿದ್ದರಿಂದ ರೆಸಾರ್ಟ್ ರಾಜಕಾರಣಕ್ಕೆ ತಿರುಗಿ ಹಣದ ಆಮಿಷ ಕೂಡ ಒಡ್ಡುವ ಮಟ್ಟಿಗೆ ಹೋಗಿ ತಲುಪಿತ್ತು.
ಅಲ್ಲದೆ, ಧಾರವಾಡದ ಶ್ರೀ ಮೃತ್ಯುಂಜಯ ಹತ್ತಿ ಸಂಸ್ಕರಣ ಸಂಘ ನಿಯಮಿತ ಧಾರವಾಡದ ಪ್ರತಿನಿಧಿಯಾಗಿ ಎಪಿಎಂಸಿಗೆ ನಾಮನಿರ್ದೇಶಿತ ಸದಸ್ಯರಾಗಿದ್ದ ದೀಪಕ ಚಿಂಚೋರೆ ಹೈಕೋರ್ಟ್ ಮೊರೆ ಹೋಗಿ ಮತದಾನದ ಹಕ್ಕು ಪಡೆದು ಬಿಜೆಪಿ ನಿದ್ದೆಗೆಡಿಸಿದ್ದರು.
ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಧಾರವಾಡ ತಹಸೀಲ್ದಾರ್ ಸಂತೋಷ ಬಿರಾದಾರ ಹೈಕೋರ್ಟ ಕಾನೂನು ಸಲಹೆ ಪಡೆದು ಮತ ಎಣಿಕೆ ಮಾಡಲು ನಿರ್ಧರಿಸಿದ್ದರು.
ಆದರೆ ಕೊನೆಗಳಿಗೆಯಲ್ಲಿ ಅವರು ಹೈಕೋರ್ಟ್ ನಲ್ಲಿ ಅರ್ಜಿ ಹಿಂದಕ್ಕೆ ಪಡೆದಿದ್ದರಿಂದ ಸೋಮವಾರ ಜು. 27ರಂದು ಮತ ಎಣಿಕೆ ನಡೆದು ಬಿಜೆಪಿ ಮೇಲುಗೈ ಸಾಧಿಸಿದೆ.
16 ಸದಸ್ಯ ಬಲದ ಧಾರವಾಡ ಎಪಿಎಂಸಿಯಲ್ಲಿ ಕಾಂಗ್ರೆಸ್ 7, ಬಿಜೆಪಿ 6, 3 ನಾಮನಿರ್ದೇಶಿತ ಸದಸ್ಯರಿದ್ದರು.
ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದ್ದರಿಂದ ಮತದಾನದ ಡಬ್ಬಿಯನ್ನು ಸೀಲ್ ಮಾಡಿ ಧಾರವಾಡದ ಖಜಾನೆಯಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ನಲ್ಲಿ ಇಡಲಾಗಿತ್ತು.
ಧಾರವಾಡ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬಸಪ್ಪ ಹೊಸೂರ, ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾ ಕೊಳ್ಳಾನಟ್ಟಿ ಮತ್ತು ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಮಹಾವೀರ ಜೈನ, ಉಪಾಧ್ಯಕ್ಷ ಸ್ಥಾನಕ್ಕೆ ಬಸ್ಸವ್ವ ಶಿರಕೊಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಯಾವ ಸದಸ್ಯರು ಕಾಂಗ್ರೆಸ್ ನತ್ತ ವಾಲದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಬಿಜೆಪಿ ಪಾಲಾಗಿವೆ.
ಇದರಿಂದಾಗಿ ಧಾರವಾಡ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಬಿಜೆಪಿ ಕೊನೆಗೂ ನಿರೀಕ್ಷೆಯಂತೆ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.
ಆಪರೇಶನ್ ಭೀತಿಯ ಹಿನ್ನಲೆಯಲ್ಲಿ ಬಿಜೆಪಿ ಶಾಸಕರು ತಮ್ಮ ಸದಸ್ಯರನ್ನು ಮುರುಡೇಶ್ವರದ ರೆಸಾರ್ಟ್ ವೊಂದರಲ್ಲಿ ಉಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.