ಧಾರವಾಡ prajakiran.com : ಬೆಳಗಾವಿ ವಿಭಾಗ ವ್ಯಾಪ್ತಿಯ ೯ ಜಿಲ್ಲೆಗಳಲ್ಲಿರುವ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-೨ ವೃಂದದ ೧೩೨ ಶಿಕ್ಷಕರಿಗೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಗ್ರುಪ್-ಬಿ ವೃಂದದ ಹುದ್ದೆಗೆ ಬಡ್ತಿ ನೀಡಲು ಇಲಾಖೆ ನಿರ್ಧರಿಸಿದೆ.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಯಿತು.
ಕೌನ್ಸೆಲಿಂಗ್ :
ಸೇವಾಜೇಷ್ಠತೆಯನ್ನು ಆಧರಿಸಿ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-೨ ವೃಂದದಒಟ್ಟು ೧೩೨ ಶಿಕ್ಷಕರಿಗೆ ಮುಂಬಡ್ತಿ ನೀಡಲಾಗುತ್ತಿದೆ.
ಆಗಷ್ಟ-೨೦ ರಂದು (ಗುರುವಾರ) ಮುಂಜಾನೆ೧೧ ಗಂಟೆಗೆ ಮೊದಲ ೬೬ ಜನರಿಗೆ ಹಾಗೂ ಅದೇ ದಿನ ಅಪರಾಹ್ನ ೩ ಗಂಟೆಗೆ ನಂತರದ ೬೬ ಜನರಿಗೆ ಪಾರದರ್ಶಕವಾಗಿ ನಡೆಸಲಾಗುವ ಕೌನ್ಸೆಲಿಂಗ್ ಮೂಲಕ ಬಡ್ತಿಯ ಸ್ಥಳ ನಿಯುಕ್ತಿಗೊಳಿಸಿ ಆದೇಶ ನೀಡಲಾಗುವುದು.
ಬಡ್ತಿ ಸೌಲಭ್ಯಕ್ಕೆ ಒಳಪಟ್ಟ ಶಿಕ್ಷಕ-ಶಿಕ್ಷಕಿಯರು ಕೋವಿಡ್-೧೯ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.
ಸಮಯ ಪಾಲನೆ ಮಾಡದೇ ಹೋದರೆ ಅದಕ್ಕೆಆಯಾ ಶಿಕ್ಷಕರೇ ಹೊಣೆಗಾರರಾಗುತ್ತಾರೆ ಎಂದು ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದರು.
ಶಿಕ್ಷಣ ಇಲಾಖೆ ಮುಂಬಡ್ತಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಭಾರ ಸಹ ನಿರ್ದೇಶಕ ಮೃತ್ಯುಂಜಯ ಕುಂದಗೋಳ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಬಡ್ತಿ ವಿಭಾಗದ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ಹೆಚ್ಚಿನ ಮಾಹಿತಿಗೆ ಇಲಾಖೆಯ ಜಾಲತಾಣ www. cpidharwad.kar.nic.in.ವೀಕ್ಷಿಸಬಹುದಾಗಿದೆ.