ಧಾರವಾಡ prajakiran.com : ಸಾರ್ವಜನಿಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಕೋವಿಡ್ ಮುಂಜಾಗೃತೆಗಾಗಿ ಧಾರವಾಡ ಜಿಲ್ಲಾಡಳಿತವು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಾಟ್ಸ್ ಅಪ್ ಮೂಲಕ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ.
ಕಚೇರಿಗೆ ಬಾರದೇ ಮನೆಯಲ್ಲಿಯೇ ಕುಳಿತು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗೆ ಅರ್ಹರನ್ನು ಆಯ್ಕೆಮಾಡಿರುವ ಕ್ರಮವನ್ನು ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದರು. ಹಾಗೂ ಫಲಾನುಭವಿಗಳಿಗೆ ಸ್ವತ: ಆದೇಶ ಪತ್ರ ವಿತರಿಸಿದರು.
ಸಂಧ್ಯಾ ಸುರಕ್ಷಾ ಪಿಂಚಣಿ ಪಡೆದ ಸಣ್ಣಮುಕ್ತುಂಸಾಬ ಗುಮ್ಮಗೋಳ ಮಾತನಾಡಿ, ಕೋವಿಡ್ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಜಿಲ್ಲಾಡಳಿತವು ವಾಟ್ಸ್ಪ್ ಮೂಲಕವೇ ನನ್ನ ಅರ್ಜಿ ಪಡೆದು ಪಿಂಚಣಿಗೆ ಆಯ್ಕೆ ಮಾಡಿರುವುದು ಸಮಾಧಾನ ತಂದಿದೆ. ಆಡಳಿತ ಯಂತ್ರದ ಬಗೆಗೆ ಹೊಸ ಭರವಸೆ ಮೂಡಿಸಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಒಂದುವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ನೇರ ಸಂವಾದ ಕಾರ್ಯಕ್ರಮದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ವಿಧವಾ ವೇತನ ಪಿಂಚಣಿ ಪಡೆಯುತ್ತಿರುವ ಧಾರವಾಡದ ಪಾರ್ವತಿ ವಿಠ್ಠಲ ಚೌಡಿ,ವಿಕಲಚೇತನರ ಪಿಂಚಣಿಗೆ ಆಯ್ಕೆಯಾದ ಮುಮ್ಮಿಗಟ್ಟಿಯ ಉಮೇಶ ಮಡಿವಾಳಪ್ಪ ಪಟಾತ, ವೃದ್ಧಾಪ್ಯ ಪಿಂಚಣಿಗೆ ಆಯ್ಕೆಯಾಗಿರುವ ಹೆಬ್ಬಳ್ಳಿಯ ಮಹಾದೇವಪ್ಪ ಪಂಪನವರ, ಉಪ್ಪಿನಬೆಟಗೇರಿಯ ಅಪ್ಪಾಸಾಬ ಹಿರೆಕುಂಬಿ ಅವರಿಗೆ ಸಚಿವರು ಆದೇಶ ಪತ್ರ ಹಸ್ತಾಂತರಿಸಿದರು.