ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಕಚೇರಿ ಎದುರು ಪ್ರತಿಭಟನೆ
ಧಾರವಾಡ ಪ್ರಜಾಕಿರಣ. ಕಾಮ್ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಧಾರವಾಡದ ಕೆ.ಸಿ. ಪಾರ್ಕ್ ರಸ್ತೆಯಲ್ಲಿ ಕಳೆದ ಎರಡು ಮೂರು ದಶಕಗಳಿಂದ ಡಬ್ಬಾ ಅಂಗಡಿ ಮೂಲಕ ಜೀವನ ಸಾಗಿಸುತ್ತಿರುವ ಹಲವಾರು ಗೂಡಂಗಡಿಕಾರರು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಸೋಮವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಅಧಿಕಾರಿ ವರ್ಗದವರು ಪದೇ ಪದೇ ಮೌಖಿಕವಾಗಿ ತೆರವುಗೊಳಿಸುವಂತೆ ಹೇಳುತ್ತಿದ್ದಾರೆ. ಪರ್ಯಾಯ ಸ್ಥಳಾವಕಾಶ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಹುಬ್ಬಳ್ಳಿ ಧಾರವಾಡ ಅವಳಿ ನಗರ ಅಷ್ಟೇ ಅಲ್ಲದೆ ದೇಶದಲ್ಲಿ ಕೋಟ್ಯಾಂತರ ಜನರು ರಸ್ತೆಬದಿಯ ಗೂಡಂಗಡಿಕಾರರು ಜೀವನ ಸಾಗಿಸುತ್ತಿದ್ದಾರೆ.
ಸ್ಮಾಟ್ ಸಿಟಿ ಅಭಿವೃದ್ಧಿ ನೆಪದಲ್ಲಿ ಬೀದಿಬದಿ ವ್ಯಾಪಾರಸ್ಥರು, ಗೂಡಂಗಡಿಕಾರರನ್ನು ಶೋಷಣೆ ಮಾಡುವುದು, ಒಕ್ಕಲೆಬ್ಬಿಸುವುದು ಯಾರೊಬ್ಬರಿಗೂ ಶೋಭೆಯಲ್ಲ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ, ಆನಂತರ ತೆರವು ಮಾಡಲಿ ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಅವರ ಜೀವನ ನಿರ್ವಹಣೆ ಮಾಡಲು ತೊಂದರೆ ಆಗಬಾರದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಹುಬ್ಬಳ್ಳಿ ಧಾರವಾಡ ಅವಳಿ ನಗರ ಸ್ಮಾಟ್ ಆದರೆ ಸಾಲದು ನಗರದ ಜನತೆಯ ಜೀವನಮಟ್ಟ ಕೂಡ ಸ್ಮಾಟ್ ಆಗಬೇಕು ಆಗ ಅದಕ್ಕೆ ಗೌರವ ಬರುತ್ತದೆ.
ಈ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳಿಗೆ, ಆಯುಕ್ತರ ಗಮನ ಸೆಳೆಯಲಾಗಿದೆ. ಅವರು ಸಕಾರಾತ್ಮಕವಾಗಿ ಸ್ದಿಸುವ ವಿಶ್ವಾಸವಿದೆ. ಕೆ.ಸಿ. ಪಾರ್ಕ್ ಗೂಡಂಗಡಿಕಾರರು ಹಾಗೂ ಅವರ ಕುಟುಂಬದ ಸದಸ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆ ಹೆಜ್ಜೆಯಿರಿಸಬೇಕು.
ಈ ಹಿಂದೆ ಪಿ.ಮಣಿವಣ್ಣನ್ ಅವರು ಆಯುಕ್ತರಾಗಿದ್ದಾಗ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. ಅದೇ ಮಾದರಿಯಲ್ಲಿ ತೆರವಿಗೂ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಬಳಿಕ ಜಂಟಿ ಆಯುಕ್ತರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆ ಯಲ್ಲಿ ಕೆ.ಸಿ. ಪಾರ್ಕ್ ಗೂಡಂಗಡಿಕಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.