ಧಾರವಾಡ prajakiran.com : ಕರೋನಾ ವಿಷಯವಾಗಿ ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಯಡವಟ್ಟಿನ ಮೇಲೆ ಯಡವಟ್ಟುಮಾಡುತ್ತಲೇ ಇದೆ.
ಇತ್ತೀಚೆಗೆಷ್ಟೇ ಧಾರವಾಡದ ಹೆಬ್ಬಳ್ಳಿ ಅಗಸಿ ನಿವಾಸಿಗೆ ಮೊದಲು ಪಾಸಿಟಿವ್ ಅಂತ ಹೇಳಿ ಆನಂತರ ನಿಮ್ಮ ವರದಿ ಬಂದಿಲ್ಲ ಎಂಬ ಸಂದೇಶ ಕಳುಹಿಸಿ ಆ ಕುಟುಂಬಸ್ಥರು ಗೋಳು ಹೊಯ್ದುಕೊಂಡ ಬೆನ್ನಲ್ಲೇ ಮತ್ತೊಂದು ಯಡವಟ್ಟು ಧಾರವಾಡ ತಾಲೂಕಿನ ವನಹಳ್ಳಿಯಲ್ಲಿ ಮಾಡಿತ್ತು.
48 ಗಂಟೆಗಳ ಬಳಿಕ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡ ಹೋದ ಆರೋಗ್ಯ ಇಲಾಖೆ ಅದೇ ಗ್ರಾಮದ ಇನ್ನೊಬ್ಬ ಮಹಿಳೆಗೆ ಮೊದಲು ನಿಮ್ಮ ವರದಿ ಪಾಸಿಟಿವ್ ಬಂದಿದೆ ಎಂದು ಹೇಳಿದೆ.
ಅಲ್ಲದೆ, ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಬರಲಿದೆ ಎಂದು ಗ್ರಾಮದ ಆಶಾ ಕಾರ್ಯಕರ್ತೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ವನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮವನ್ನೇ ಸೀಲ್ ಡೌನ್ ಮಾಡಿತು. ಅಲ್ಲದೆ, ಮಹಿಳೆ ಸಂಜೆಯವರೆಗೆ ಕಾದರೂ ಅಂಬುಲೆನ್ಸ್ ಅವರನ್ನು ಕರೆದುಕೊಂಡು ಹೋಗಿಲ್ಲ.
ಈ ಬಗ್ಗೆ ಮತ್ತೋಮ್ಮೆ ವಿಚಾರಿಸಿದರೆ ನಿಮ್ಮ ವರದಿ ನೆಗೆಟಿವ್ ಎಂದು ಹೇಳಿ ಕೈ ತೊಳೆದುಕೊಂಡಿದೆ.
ಇದರಿಂದಾಗಿ ಆ ಮಹಿಳೆ ಹಾಗೂ ಆಕೆಯ ಕುಟುಂಬದವರು ದಿಕ್ಕು ತೋಚದೆ ಕಂಗಲಾಗಿದ್ದಾರೆ. ಅಲ್ಲದೆ, ಗ್ರಾಮಸ್ಥರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಪಾಸಿಟಿವ್ ಇಲ್ಲದಿದ್ದರೆ ಮೊದಲು ಹೇಳಿದ್ದು ಏಕೆ. ಈಗ ಯಾಕೆ ಈ ರೀತಿ ಹೇಳಿದ್ದಾರೆ. ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಅಲ್ಲದೆ, ಆಕೆ ಜೊತೆಗೆ ಕೆಲಸ ಮಾಡುತ್ತಿದ್ದಅನೇಕ ಮಹಿಳೆಯರು ಅಮರಗೋಳ ಗಾರ್ಮೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುವುದನ್ನು ಕೈ ಬಿಟ್ಟಿದ್ದಾರೆ.
ಧಾರವಾಡ ಜಿಲ್ಲಾ ಆರೋಗ್ಯ ಇಲಾಖೆ ಯಡವಟ್ಟಿಗೆ ವನಹಳ್ಳಿ ಮಹಿಳೆ ಹಾಗೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಸಂಪೂರ್ಣ ವಿಫಲ ಹಾಗೂ ನಿಷ್ಕ್ರಿಯವಾಗಿದೆಯೇ ಎಂದು ಅಳಲುತೋಡಿಕೊಂಡಿದ್ದಾರೆ.
ಪಾಸಿಟಿವ್ ವರದಿ ನೆಗೆಟಿವ್ ಆಗಿದ್ದು ಹೇಗೆ, ಬೆಳಗ್ಗೆ ಪಾಸಿಟಿವ್ ಇದ್ದ ವರದಿ ರಾತ್ರಿ 7 ಗಂಟೆಗೆ ನೆಗೆಟಿವ್ ಅಂತ ಹೇಗೆ ಹೇಳಿದ್ದರು. ಒಮ್ಮೆ ನೆಗೆಟಿವ್ ಮತ್ತೊಮ್ಮೆ ಪಾಸಿಟಿವ್ ಬಂದರೆ ಹೇಗೆ.
ಜಿಲ್ಲಾಡಳಿತ ಬಡ ಜನರ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ಬೇಜವಾಬ್ದಾರಿಯಿಂದ ವನಹಳ್ಳಿ ಗ್ರಾಮದಅನೇಕ ಮಹಿಳೆಯರು ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದರು.
ಕರೋನಾಕ್ಕೆ ಹೆದರಿ ಕೆಲಸಕ್ಕೆ ಕಲ್ಲು ಬಿದ್ದಿದೆ. ಅವರ ಜೀವನ ನಿರ್ವಹಣೆ ಪ್ರಶ್ನೆ ಎದುರಾಗಿದೆ ಎಂದು ಗುಡುಗಿದರು.
ಜಿಲ್ಲೆಯ ಜನಪ್ರತಿನಿಧಿಗಳು ಏನೂ ಮಾಡುತ್ತಿದ್ದಾರೆ. ನಮಗೇನು ತಿಳಿಯುತ್ತಿಲ್ಲ.ಅವರ ದಿವ್ಯ ನಿರ್ಲಕ್ಷ್ಯಕ್ಕೆ ಇನ್ನಷ್ಟು ಜನರು ಬಲಿಪಶುಗಳಾಗಬೇಕು ಎಂಬುದು ತಿಳಿಯದಂತಾಗಿದೆ ಎಂದು ಹೇಳಿದರು.