ಧಾರವಾಡ prajakiran.com : ಬಿ ಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಲ್ಲದೆ ಮುಂಬಡ್ತಿ ಮಾಡಬೇಕಾದರೆ ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ ಪರವಾನಿಗೆ ಅಗತ್ಯ. ಅವರು ಮಾಡಿ ಅಂದರೆ ಮಾಡೋದು ಬೇಡ ಅಂದ್ರೆ ಬಿಡುವುದು.
ಜೊತೆಗೆ ಪ್ರಮೋಟ್ ಮಾಡಬೇಕಾದರೆ ಯಾವ ರೀತಿ ಮಾಡಬೇಕು. ಎಲ್ಲವೂ ಕುಲುಂಕುಶವಾಗಿ ವಿವರ ಕೇಳಬೇಕು.
ಹೀಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಈ ಬಗ್ಗೆ ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ ಗೆ ಪತ್ರ ಬರೆದು, ಅವರಿಂದ ಕುಲಂಕೂಶವಾದ ಮಾಹಿತಿ ಪಡೆಯಲು ನಿರ್ಧರಿಸಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ. ರವೀಂದ್ರನಾಥ ಕದಂ ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.
ಈ ಬಗ್ಗೆ ವಿಶ್ವವಿದ್ಯಾಲಯಕ್ಕೆ ಸಹ ಹಲವು ಗೊಂದಲಗಳಿರುವುದರಿಂದ ನಿನ್ನೇ ನಡೆದ ಡೀನ್ಸ್ ಕಮಿಟಿ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿದೆ.
ಬಿ ಎಡ್ ವೃತ್ತಿ ಶಿಕ್ಷಣವಾಗಿರುವುದರಿಂದ ಮುಂಬಡ್ತಿ ನೀಡುವುದಾದರೆ ಯಾವ ಮಾನದಂಡ ಅನುಸರಿಸಬೇಕು. ಬಿ ಎ ಅಂಕಗಳನ್ನು ಪರಿಗಣಿಸಬೇಕೆ, ಜೊತೆಗೆ ಆಂತರಿಕ ಮೌಲ್ಯ ಮಾಪನ ಅಂಕಗಳನ್ನು ಪರಿಗಣಿಸಬೇಕೆ ಎಂಬುದರ ಚರ್ಚೆ ನಡೆಸಲಾಗಿದೆ.
ಅವರ ಸಲಹೆ, ಸೂಚನೆ ಮೇರೆಗೆ ಕವಿವಿ ಮುಂದಿನ ನಿರ್ಧಾರ ಪ್ರಕಟಿಸಲಿದೆ. ಇದು ಮುಂದೆ ತಾಂತ್ರಿಕ ಸಮಸ್ಯೆಯಾಗದಂತೆ ಹೆಜ್ಜೆ ಇರಿಸಲು ಸಹಾಯಕವಾಗಲಿದೆ.
ಇದಲ್ಲದೆ, ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ಕೂಡ ಕರ್ನಾಟಕ ವಿಶ್ವವಿದ್ಯಾಲಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ಪ್ರಜಾಕಿರಣ.ಕಾಮ್ ಗೆ ವಿವರಿಸಿದರು.
ಪರೀಕ್ಷೆ ಬರೆಯದೆ ಪ್ರಮೋಟ್ ಆಗಲು ಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮೋಟ್ ಮಾಡಿ ಇನ್ನುಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು.
ಈ ಬಗ್ಗೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದು, ಈ ಬಗ್ಗೆ ಕಾಲೇಜುಗಳಿಂದ ಮಾಹಿತಿ ಪಡೆದುಕೊಳ್ಳಲಾಗುವುದು.
ಅಲ್ಲಿಯವರೆಗೆ ಸದ್ಯಕ್ಕೆ ಸೆ. 11ರಿಂದ ಸೆ. 19ರವರೆಗೆ ನಡೆಯುವ ಪರೀಕ್ಷೆಗಳನ್ನು ತಡೆಹಿಡಿಯಲಾಗಿದೆ.
ಸೆ. 21ರ ಒಳಗೆ ನ್ಯಾಶನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್ ವತಿಯಿಂದ ಸ್ಪಷ್ಟ ಮಾಹಿತಿ ದೊರೆತ ನಂತರ ಕರ್ನಾಟಕ ವಿಶ್ವವಿದ್ಯಾಲಯ ಮುಂದಿನ ಹೆಜ್ಜೆ ಅನುಸರಿಸಲಿದೆ ಎಂದರು.
ಅಲ್ಲಿಯವರೆಗೆ ಬಿ ಎಡ್ ಪರೀಕ್ಷೆಗಳಂತೂ ಇಲ್ಲ. ಇದಲ್ಲದೆ, ಈಗಾಗಲೇ ಬಿ ಎಡ್ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಎರಡನೇ ಸೆಮಿಸ್ಟರ್ ಗೆ ಬಡ್ತಿ ನೀಡಿ, ಆನ್ ಲೈನ್ ಮೂಲಕ ತರಗತಿಗಳನ್ನು ಆರಂಭಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ಬಿ ಎಡ್ ಕಾಲೇಜುಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ಕಾಲೇಜಿನಿಂದ ಪರೀಕ್ಷೆ ಬರೆಯುವವರ ಸಂಖ್ಯೆ ಎಷ್ಟು, ಪರೀಕ್ಷೆ ಬರೆಯದೆ ಪ್ರಮೋಟ್ ಆಗಲು ಬಯಸುವ ವಿದ್ಯಾರ್ಥಿಗಳ ವಿವರ ಸಂಗ್ರಹಿಸಲು ನಿರ್ದೇಶನ ನೀಡಲಾಗುವುದು ಎಂದರು.
ಈ ಪರೀಕ್ಷೆಗಳು ನಡೆಸಿದರೆ ಹಿಂದಕ್ಕೆ ಉಳಿಸಿಕೊಂಡ ವಿದ್ಯಾರ್ಥಿಗಳಿಗೆ ಅಂದರೆ ರಿಪಿಟರ್ಸ್ ಇದ್ದರೆ ಮತ್ತೆ ಗೊಂದಲ ಶುರುವಾಗುತ್ತದೆ ಎಂದು ಕವಿವಿ ಮೌಲ್ಯ ಮಾಪನ ಕುಲಸಚಿವ ಡಾ. ರವೀಂದ್ರನಾಥ ಕದಂ ಅವರು ಪ್ರಜಾಕಿರಣ.ಕಾಮ್ ಗೆ ಸ್ಪಷ್ಟಪಡಿಸಿದರು.