ಧಾರವಾಡ ಪ್ರಜಾಕಿರಣ.ಕಾಮ್ : ಮಹಿಳಾ ವಕೀಲರ ಜೊತೆಗೆ ಧಾರವಾಡ ಗ್ರಾಮಿಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಂಜುನಾಥ ಕುಸುಗಲ್ ಅಸಭ್ಯ ವರ್ತನೆ ತೋರಿದ ಆಪಾದನೆಗೆ ಗುರಿಯಾಗಿದ್ದಾರೆ.
ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ವಕೀಲರ ಸಂಘದ ಹತ್ತು ಹಲವು ಪದಾಧಿಕಾರಿಗಳು ಐದು ತಾಸು ಕಾದರೂ ಪ್ರಕರಣ ದಾಖಲಿಸಲು ಉಪನಗರ ಠಾಣೆ ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ವಕೀಲರಾದ ಕೆ.ಎಚ್. ಪಾಟೀಲ ಅವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದರು.
ಇದರಿಂದಾಗಿ ರೊಚ್ಚಿಗೆದ್ದ ವಕೀಲರ ಸಂಘದ ಪದಾಧಿಕಾರಿಗಳು ಉಪನಗರ ಠಾಣೆ ಪೊಲೀಸ್ ಅಧಿಕಾರಿ ವರ್ಗದವರ ನಡೆಯ ವಿರುದ್ಧ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲೇಬೇಕು ಎಂದು ವಕೀಲರ ಸಂಘದ ಪದಾಧಿಕಾರಿಗಳು ಪಟ್ಟು ಹಿಡಿದು ಐದು ಗಂಟೆ ಕಾದರೂ ಯಾವುದೇ ರೀತಿಯ ಪ್ರಯೋಜನವಾಗದೆ ರಾತ್ರಿ ಹನ್ನೊಂದು ಗಂಟೆಗೆ ಅಲ್ಲಿಂದ ತೆರಳಿದರು.
ಜನಸಾಮಾನ್ಯರಿಗೆ ಒಂದು ಪೊಲೀಸರಿಗೆ ಒಂದು ನೆಲದ ಕಾನೂನು ಇದೆಯೇ ಎಂದು ಕಿಡಿಕಾರಿದರು.
ಆದರೆ ಎಫ್ ಐ ಆರ್ ದಾಖಲಿಸುವುದಾಗಿ ವಕೀಲರ ಮನವೊಲಿಸುವ ಪ್ರಯತ್ನ ನಡೆಸಿ, ಅನಗತ್ಯವಾಗಿ ವಿಳಂಬ ಮಾಡುವ ಮೂಲಕ ಇನ್ಸಪೆಕ್ಟರ್ ಮಂಜುನಾಥ ಕುಸುಗಲ್ ರಕ್ಷಣೆ ಮಾಡಲು ಪೊಲೀಸ್ ಇಲಾಖೆ ಯತ್ನಿಸಿದೆ ಎಂದು ವಕೀಲ ಕೆ.ಎಚ್. ಪಾಟೀಲ ದೂರಿದ್ದಾರೆ.
ಹೀಗಾಗಿ ಧಾರವಾಡ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಪೊಲೀಸರ ನಡುವೆ ಜಟಾಪಟಿ ಎರ್ಪಟ್ಟಿದ್ದು ಇದು ಯಾವ ತಿರುವು ಪಡೆಯುತ್ತದೆ ಎಂಬುದು ಕಾದು ನೋಡಬೇಕು.
ಘಟನೆ ವಿವರ: ಧಾರವಾಡ ಜಿಲ್ಲೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಅಪಹರಣ , ಮಹಿಳೆಯರು ಹಾಗೂ ಮಕ್ಕಳ ಲೈಂಗಿಕ ದೌರ್ಜನ್ಯ ಕುರಿತು ಮಾಹಿತಿಯನ್ನು ಪಡೆಯಲು ಧಾರವಾಡ ಗ್ರಾಮೀಣ. ಪೊಲೀಸ್ ಠಾಣೆಗೆ ಹೋದಾಗ ಮಹಿಳಾ ವಕೀಲರ ಜೊತೆಗೆ ಇನ್ಸಪೆಕ್ಟರ್ ಮಂಜುನಾಥ ಕುಸುಗಲ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ವಕೀಲರ ಸಂಘದ ಪದಾಧಿಕಾರಿಗಳು ಉಪನಗರ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ಆದರೆ ಈವರೆಗೆ ಎಫ್ ಐ ಆರ್ ದಾಖಲಾಗಿಲ್ಲ.