ಕಲಬುರಗಿ prajakiran.com : ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ನಾಡೋಜ ಗೀತಾ ನಾಗಭೂಷಣ (78) ಅವರು ಕಲಬುರಗಿಯಲ್ಲಿ ಭಾನುವಾರ ರಾತ್ರಿ ನಿಧನ ಹೊಂದಿದರು.
ತೀವ್ರ ಹೃದಯಾಘಾತ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು.
ಕಲಬುರಗಿಯ ಗೀತಾ ನಾಗಭೂಷಣ್ 2010ರಲ್ಲಿ ಗದಗನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು.
ನಾಡೋಜ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆ ಹೊಂದಿದ್ದರು.
ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಲಭಿಸಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಖ್ಯಾತಿಯೂ ಇವರಿಗಿದೆ.
ಕಲ್ಬುರ್ಗಿಯ ಜಿಲ್ಲೆಯ ಸಾವಳಗಿ ಎಂಬ ಗ್ರಾಮದಲ್ಲಿ 25 ಮಾರ್ಚ್ 1942ರಲ್ಲಿ ಜನಿಸಿದ ಗೀತಾ ನಾಗಭೂಷಣ್ ಆಗಿನ ಎಲ್ಲಾ ಸಾಮಾಜಿಕ ಕಟ್ಟುಪಾಡುಗಳನ್ನು ನಿರ್ಲಕ್ಷಿಸಿ ಶಾಲೆ ಕಲಿತವರು.
ಬಿಎ, ಬಿಎಡ್ ಹಾಗೂ ಎಂಎ ಪದವಿ ಕಲಿತ ಅವರು ಆರಂಭದಲ್ಲಿ ಕ್ಲರ್ಕ್ ಆಗಿ ಆನಂತರ ಕಲಬುರಗಿಯ ಸಂಯುಕ್ತ ಕಿರಿಯ ಮಹಾವಿದ್ಯಾಲಯದ ಉಪನ್ಯಾಸಕಿಯಾಗಿ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು.
ನಾಡೋಜ ಗೀತಾ ನಾಗಭೂಷಣ್ ತಮ್ಮ ಸುದೀರ್ಘ ಸಾಹಿತ್ಯ ಕೃಷಿಯಲ್ಲಿ ಒಟ್ಟು 27 ಕಾದಂಬರಿ, 50 ಸಣ್ಣ ಕಥೆಗಳು, ಎರಡು ಕವನ ಸಂಕಲನಗಳು, 12 ನಾಟಕಗಳ ಜೊತೆಗೆ ತಲಾ ಒಂದು ಸಂಪಾದನಾ ಕೃತಿ ಹಾಗೂ ಸಂಶೋಧನಾ ಕೃತಿ ರಚಿಸಿದ್ದಾರೆ. ಇವರ ಹಸಿ ಮಾಂಸ ಮತ್ತು ಹದ್ದು ಕೃತಿ ಹೆಣ್ಣಿನ ಕೂಗು ಎನ್ನುವ ಕನ್ನಡ ಸಿನಿಮಾವಾಗಿ ಮೂಡಿ ಬಂದಿತ್ತು.
ಕನ್ನಡದ ಹಲವು ಸಾಹಿತಿಗಳು, ಹೋರಾಟಗಾರರು, ಚಿಂತಕರು, ಗಣ್ಯರು ಅವರ ನಿಧನದಿಂದ ಕನ್ನಡ ಸ್ವಾರಸ್ವತ ಲೋಕ ಬಡವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.