ಹಾವೇರಿ prajakiran.com : ಹೊಸೂರು-ಉಡಗಣಿ -ತಾಳಗುಂದ ಏತನೀರಾವರಿ ಯೋಜನೆಗೆ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಧಾರವಾಡ ಹೈಕೋರ್ಟ್ ನ ಹಿರಿಯ ವಕೀಲ ಬಿ.ಡಿ. ಹಿರೇಮಠ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಒಂಬತ್ತನೆಯ ದಿನ ಪೂರೈಸಿದೆ.
ಶುಕ್ರವಾರ ರೈತರ ಹೋರಾಟ ಬೆಂಬಲಿಸಿ, ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಶಾಸಕ ಎನ್. ಹೆಚ್. ಕೋನರಡ್ಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ,ಜಯ ಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲೆಯ ಅಧ್ಯಕ್ಷ ಸುಧೀರ ಮುಧೋಳ ನೇತೃತ್ವದಲ್ಲಿ ಬೆಂಬಲ ನೀಡಲಾಯಿತು.
ಹಾವೇರಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಬೇಕಾಗುತ್ತದೆ ಎಂದು ಬಿ.ಡಿ. ಹಿರೇಮಠ ಎಚ್ಚರಿಸಿದರು.
ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಪುರಾತನ ಕೋಟೆ ಹತ್ತಿರ ರೈತರ ಜಮೀನಿನಲ್ಲಿ ಪೈಪ್ ಲೈನ್ ಹಾಕುವ ಬದಲಿಗೆ ಸರಕಾರದ ಜಮೀನಿನಲ್ಲಿ ಹಾಕಲಿ ಎಂದು ಆಗ್ರಹಿಸಿದರು.
ಈಗಾಗಲೇ ಅನೇಕ ರೈತರು ಜಮೀನು ಕಳೆದುಕೊಂಡರೂ ಹದಿನೆಂಟು ನೂರು ರೈತರಿಗೆ ನೀರಾವರಿ ಸೌಲಭ್ಯ ಮರಿಚಿಕೆಯಾಗಿ ಉಳಿದಿದೆ.
ಅದೇ ರೀತಿಯಾಗಿ ಹಾವೇರಿ ಜಿಲ್ಲೆಯ ಸಾವಿರಾರು ರೈತರಿಗೆ ಕಳೆದ 20 ವರ್ಷಗಳಿಂದ ಸರ್ಕಾರ ವಿವಿಧ ಯೋಜನೆಗಳಿಗೆ ಭೂ ಸ್ವಾಧೀನ ಮಾಡಿಕೊಂಡ ಪರಿಹಾರ ಹಣ ಈವರೆಗೆ ಬಿಡುಗಡೆಗೊಂಡಿಲ್ಲ.
ಇದಲ್ಲದೆ, ಅಪರ್ ತುಂಗಾ ಯೋಜನೆಯಲ್ಲಿಯೂ ಸಹ ಭೂಮಿ ಕಳೆದುಕೊಂಡಂತಹ ರೈತರಿಗೆ ಪರಿಹಾರ ಸಿಗದೇ ಇರುವಾಗ ಮತ್ತೆ ರೈತರು ಯಾವ ಪುರುಷಾರ್ಥಕ್ಕೆ ಸರಕಾರಕ್ಕೆ ಜಮೀನು ನೀಡಬೇಕು ಎಂದು ತರಾಟೆ ತೆಗೆದುಕೊಂಡರು.
ಇದೀಗ ರೈತರು
ತಮ್ಮ ಜಮೀನನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವ ಪ್ರಸಂಗ ಎದುರಾಗಿರುವುದು ನೋವಿನ ಸಂಗತಿಯಾಗಿದೆ.
ಜಮೀನನ್ನು ಕಳೆದುಕೊಳ್ಳುವ ಆತಂಕದಲ್ಲಿ ರೈತರು ದಿನನಿತ್ಯ ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ಕಿಡಿಕಾರಿದರು.
ಸುಮಾರು 50 ವರ್ಷಗಳಿಂದ ಊರಿನಿಂದ ಮೈಸೂರಿನವರೆಗೂ ಪಿಡಬ್ಲ್ಯೂಡಿ ರಸ್ತೆಗಾಗಿ ರೈತರ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡಿರುವ ಸರಕಾರ ಅದರ ಪರಿಹಾರ ಹಣ ಈತನಕ ನೀಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೈಕೋರ್ಟ್ ಹಿರಿಯ ವಕೀಲ ಬಿ.ಡಿ. ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ
ಮತ್ತೆ ರೈತರ ಜಮೀನುಗಳನ್ನು ನೀರಾವರಿ ಯೋಜನೆ ಹೆಸರಿನಲ್ಲಿ ಯಾಮಾರಿಸುವುದು ಸರಿಯಾದ ಬೆಳವಣಿಗೆ ಅಲ್ಲ.
ಬೇಡಿಕೆ ಈಡೇರಿಸುವರೆಗೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿ.ಡಿ. ಹಿರೇಮಠ ಸ್ಪಷ್ಟಪಡಿಸಿದರು