ಧಾರವಾಡ prajakiran. com : ಓದಿದ್ದು ವೈದ್ಯಕೀಯ ಪದವಿ. ಪ್ರತಿಷ್ಠಿತ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿ ತಂದೆಯಿಂದ ಬಳುವಳಿಯಾಗಿ ಬಂದ ಹೊಟೆಲ್ ಉದ್ಯಮವನ್ನು ನಡೆಸುತ್ತಾ, ಜನರ ಒತ್ತಾಸೆಗೆ ಮಣಿದು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಅತಿ ಚಿಕ್ಕ ವಯಸ್ಸಿನಲ್ಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿರುವ ಡಾ. ಮಯೂರ್ ಮೋರೆ ತಮ್ಮ ಸಾಮಾಜಿಕ ಕಳಕಳಿ, ಅವಳಿ ನಗರದ ಅಭಿವೃದ್ಧಿಗೊಂದು ಕನಸು, ಚಿಂತನೆಯನ್ನು ಹೊಂದಿರುವ ಹೊಸ ಭರವಸೆಯ ಯವನಾಯಕ.
ವಿದ್ಯಾರ್ಥಿ ದೆಸೆಯಿಂದಲೇ ಅನ್ಯಾಯದ ವಿರುದ್ಧ ಸೆಣೆಸಬೇಕೆಂಬ ಮನೋಭಾವ ಹೊಂದಿ ಯುವಕರ ಕಣ್ಮಣಿಯಾಗಿ ಹೊರಹೊಮ್ಮಿದ್ದಾರೆ. ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡು ಬಡವರು, ದೀನ ದಲಿತರು, ತುಳಿತಕ್ಕೊಳಗಾದವರ ಬದುಕಿಗೊಂದು ಶಾಶ್ವತ ’ಚಿಕಿತ್ಸಕ’ನಾಗಲು ಹೊರಟಿರುವ ಡಾ. ಮಯೂರ್ ಮೋರೆ ನವಲೂರ ಸುತ್ತಮುತ್ತಲ ಪ್ರದೇಶಗಳಾದ ರಾಯಾಪುರ,ಸತ್ತೂರ ಒಳಗೊಂಡ ೨೪ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಯೂರ್ ಗೆಲುವಿನಲ್ಲಿ ಅವರ ತಂದೆ ಮನೋಹರ ಮೋರೆಯವರ ನೆರಳಿದೆ. ದೀನ ದಲಿತರ, ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಮನೋಹರ ಮೋರೆಯವರು ಸಾಮಾಜಿಕವಾಗಿ , ಶೈಕ್ಷಣಿಕವಾಗಿ ದೊಡ್ಡ ಹೆಸರಾಗಿ ಅವಳಿನಗರದಲ್ಲಿ ಅಲ್ಲದೇ ಉತ್ತರ ಕರ್ನಾಟಕದಲ್ಲೇ ತಮ್ಮ ಛಾಪನ್ನು ಮೂಡಿಸಿದವರಾಗಿದ್ದಾರೆ.
ಶೈಕ್ಷಣಿಕ ಜೀವನ: ಡಾ || ಮಯೂರ ಮನೋಹರ ಮೋರೆ ಪ್ರಾಥಮಿಕ ಶಿಕ್ಷಣವನ್ನು ಬಾಸೆಲ್ ಮಿಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪೂರೈಸಿದ್ದು, ನಂತರ ಫ್ರೌಢ ಶಿಕ್ಷಣವನ್ನು ಮಂಗಳೂರಿನ ಸೆಂಟ ಅಲೊಯಿಸಿಸ್ ಕಾಲೇಜಿನಲ್ಲಿ, ಎಮ.ಬಿ.ಬಿ.ಎಸ್ ಪದವಿಯನ್ನು ಧಾರವಾಡ ಎಸ್.ಡಿ.ಎಮ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರೈಸಿದರು. ಹಾಗೂ ಹೆಲ್ತಕೇರ ಮ್ಯಾನೆಜಮೆಂಟ್ನಲ್ಲಿ ವಿಶೇಷವಾದ ವ್ಯಾಸಂಗವನ್ನು ಲಂಡನ್ನಿನಲ್ಲಿ ಪೂರೈಸಿದ್ದಾರೆ.
ವೃತ್ತಿ ಬದುಕು: ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಡಾ: ರಾಮಯ್ಯಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಧಾರವಾಡದ ’ಮಲೆನಾಡು’ ನವಲೂರಿಗೆ ಬಂದು ತಂದೆಯವರಿಂದ ಬಂದ ಬಳುವಳಿ ವೃತ್ತಿಯಾದ ಹೋಟೆಲ್ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರಲ್ಲದೇ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಆಹಾರ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ ನೂರಾರು ಬಡ ಕುಟುಂಬಗಳ ಪಾಲಿಗೆ ಅನ್ನದಾತರಾಗಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿನ ಅಭಿವೃದ್ಧಿಯ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಬೇಕೆಂಬ ಪ್ರಾಮಾಣಿಕ ಆಶಯ ೩೪ ಹರೆಯದಲ್ಲೇ ರಾಜಕೀಯಕ್ಕೆ ಕೈ ಬೀಸಿ ಕರೆದಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ನವಲೂರಿನಲ್ಲಿ ಸಾಯಿರಾಮ ವಿದ್ಯಾಕೇಂದ್ರ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ದಾರಿ ದೀಪವಾಗಿದ್ದಾರೆ.
ಇಷ್ಟಲ್ಲದೇ ನಗರ ಗ್ರಾಮೀಣ ಪ್ರದೇಶದಲ್ಲಿನ ದೇವಸ್ಥಾನ, ಮಸೀದಿ, ಜೀರ್ಣೋದ್ಧಾರ ಹಾಗೂ ಹೊಸ ದೇವಸ್ಥಾನಗಳ, ಊರಿನ ಅಭಿವೃದ್ಧಿ ಕಾರ್ಯಗಳ ನಿರ್ಮಾಣ, ಸಾಮೂಹಿಕ ವಿವಾಹಕ್ಕೆ ತನು-ಮನ-ಧನದಿಂದ ಮೋರೆ ಕುಟುಂಬ ಮೊದಲಿನಿಂದಲೂ ಸಹಾಯ ಮಾಡುತ್ತ ಬಂದಿದ್ದು ಆ ಪರಂಪರೆಯನ್ನು ಮಯೂರ ಮುಂದುವರಿಸಿದ್ದಾರೆ.
ಎಲ್ಲ ಮುಖಂಡರು ಬದ್ಧತೆ, ಇಚ್ಚಾಶಕ್ತಿ ಪ್ರದರ್ಶಿಸಿ, ಪ್ರಾಮಾಣಿಕತೆ ಯಿಂದ ಅಭಿವೃದ್ಧಿಯತ್ತ ಗಮನ ಹರಿಸಿದರೆ ಅವಳಿನಗರ ನೂರಕ್ಕೆ ನೂರರಷ್ಟು ಶಿಸ್ತುಬದ್ಧ ನಗರವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ಡಾ.ಮಯೂರ ನೇರ ಮಾತು
ನಿರುದ್ಯೋಗ,ಬಡತನ, ಅನಾರೋಗ್ಯ,ಭ್ರಷ್ಟಾಚಾರಗಳು ನಿರ್ಮೂಲನೆ ಆದಾಗ ಮಾತ್ರ ರಾಷ್ಟ್ರಪಿತ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯ.ಅದಕ್ಕಾಗಿ ಜಾತ್ಯತೀತತೆಗೆ ಅನ್ವರ್ಥಕವಾದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ನಿರತನಾಗಿರುವುದಾಗಿ ಹೇಳಿದರು.
ಚಟುವಟಿಕೆ ವಿಸ್ತರಣೆ
’ಮನೆ ಗೆದ್ದು ಮಾರು ಗೆಲ್ಲು’ ಎಂಬ ಉಕ್ತಿಯಂತೆ ಈಗಾಗಲೇ ವಾರ್ಡಿನಾದ್ಯಂತ ಚಟುವಟಿಕೆಗಳನ್ನು ನಡೆಸಿರುವ ಡಾ. ಮಯೂರ ದಿ.ಮೇ ೧೭ರಂದು ತಮ್ಮ ಜನ್ಮದಿನದಂತೆ ಮಯೂರ ಮೋರೆ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಧಾರವಾಡ ನಗರದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ.
ಧಾರವಾಡದಲ್ಲಿ ಆಯ್ದ ಕೆಲ ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳ ಅಭಿವೃದ್ಧಿಗೆ ಪ್ರಯತ್ನಿಸುವುದು. ಧಾರವಾಡ ನಗರದ ಒಟ್ಟು ವಾರ್ಡಗಳಲ್ಲಿ ೮ ವಾರ್ಡಗಳಲ್ಲಿ ಮಾತ್ರ ನಿರಂತರ ನೀರು ಸೌಲಭ್ಯವಿದ್ದು ಉಳಿದ ವಾರ್ಡಗಳಿಗೂ ವಿಸ್ತರಿಸಲು ಒತ್ತಡ ಹೇರುವುದು.
ಪೇಡೆನಗರದ ನಿರ್ಲಕ್ಷಿತ ಇತರ ಉದ್ಯಾನವನಗಳ ಅಭವೃದ್ಧಿ, ವಿಶೇಷವಾಗಿ ನಗರದ ಹೃದಯ ಭಾಗದಲ್ಲಿನ ಏಕೈಕ ಮಾರುಕಟ್ಟೆ ಸುಪರ್ ಮಾರ್ಕೆಟ್ನ್ನು ಆಧುನಿಕ ಮಾದರಿಯಲ್ಲಿ ನವೀಕರಣ ಮಾಡಿ ಸಾರ್ವಜನಿಕರ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲು ಹೋರಾಟ, ನಿಜ ಅರ್ಥದಲ್ಲಿ ಧಾರವಾಡದ ಅಭಿವೃದ್ದಿಯೇ ಗುರಿಯಾಗಿದೆ.ಈಗಾಗಲೇ ಈ ನಿಟ್ಟಿನಲ್ಲಿ ಸಮಾನ ಮನಸ್ಕರೊಂದಿಗೆ ಚಿಂತನೆ ನಡೆಸುವ ಮೂಲಕ ಚಾಲನೆ ನೀಡಿದ್ದಾರೆ.