ಬೆಂಗಳೂರು prajakiran.com : ಕೇಂದ್ರ ಸರಕಾರ ಕಳೆದ 20 ದಿನಗಳಿಂದ ನಿರಂತರವಾಗಿ ಡಿಸೇಲ್ ಗೆ 1 ಲೀಟರ್ ಗೆ 29 ಏರಿಕೆ ಹಾಗೂ ಪೆಟ್ರೋಲ್ ಗೆ 25 ರೂ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸೈಕಲ್ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಡವರ ರಕ್ತವನ್ನು ಹೀರಿ ಸರಕಾರದ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ. ಆರು ವರ್ಷದಲ್ಲಿ ಎಕ್ಸೆಸ್ ಡ್ಯೂಟಿ ಒಂದರಲ್ಲೇ 18 ಲಕ್ಷ ಕೋಟಿ ಸಂಗ್ರಹ ಮಾಡಿ ಜನರ ಕೊಳ್ಳೆ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದರು.
ರೈತರಿಗೆ, ಬಡವರಿಗೆ ಮಧ್ಯಮ ವರ್ಗದ ಜನತೆಗೆ ಹೊರೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಬೆಲೆ ಹೆಚ್ಚಳ ಮಾಡಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿ ವರೆಗೆ ಸೈಕಲ್ ರ್ಯಾಲಿ ನಡೆಸಿದರು. ಕೆಪಿಸಿಸಿ ಕಚೇರಿಯಿಂದ ಮೀನ್ಸ್ ಸ್ಕ್ವೆರ್ ವೃತ್ತದಲ್ಲಿರುವ ಆದಾಯ ತೆರಿಗೆ ಕಟ್ಟಡದ ಕಡೆ ಹೊರಟ ಸೈಕಲ್ ರ್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ @DKShivakumar, ವಿರೋಧ ಪಕ್ಷದ ನಾಯಕ @siddaramaiah, ಕಾರ್ಯಾಧ್ಯಕ್ಷ @SaleemAhmadINC, ಎಂ.ಎಲ್.ಸಿ.@HariprasadBK2, ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
ನಂತರ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಧರಣಿ ನಡೆಸಿದರು.
ಅಲ್ಲದೆ, ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ಕೆಪಿಸಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಅಂಗವಾಗಿ ಯುವ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ವಿನೂತನವಾಗಿ ದ್ವಿಚಕ್ರ ವಾಹನವನ್ನು ಹೆಗಲ ಮೇಲೆ ಹೊತ್ತಿಕೊಂಡು ಹೋಗುವ ಅಣಕು ಪ್ರದರ್ಶನ ನಡೆಸಿದರು.
ಅಲ್ಲದೆ, ಇದೇ ವಿಚಾರವಾಗಿ ಎಲ್ಲಾ ತಾಲೂಕು, ಬ್ಲಾಕ್ ಕೇಂದ್ರಗಳಲ್ಲಿ ಜುಲೈ 4, 5, 6, 7 ರಲ್ಲಿ ಯಾವುದಾದರೂ ಒಂದು ದಿನ ಪ್ರತಿಭಟನೆಗಳು ನಡೆಯಲಿವೆ.
ಸೈಕಲ್ ಮೂಲಕವೇ ಕೇಂದ್ರ ಸರ್ಕಾರದ ಜಿ.ಪಿ.ಒ ಕಚೇರಿಯವರೆಗೆ ತೆರಳಿ, ರಾಷ್ಟ್ರಪತಿಗಳಿಗೆ ಬರೆದಿರುವ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.