ವಿದ್ಯಾವಂತರ ಅಮೋಘ ಸಾಧನೆ
ಯುವ ಪೀಳಿಗೆಗೂ ಮಾದರಿ ಈ ಊರು
ಮಂಜುನಾಥ ಎಸ್. ರಾಠೋಡ
ಗದಗ : ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರು ಗ್ರಾಮವೊಂದರಲ್ಲಿ ಬರೋಬ್ಬರಿ ೫೮೦ ಶಿಕ್ಷಕರು ಅಕ್ಷರ ಸೇವೆಯ ಮೂಲಕ ರಾಜ್ಯದ ಗಮನ ಸೆಳೆದಿದೆ.
ಇಲ್ಲಿನ ಸಾಕಷ್ಟು ಮಂದಿ ರಾಜ್ಯದ ವಿವಿಧ ಭಾಗಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕರು, ಪ್ರೋಪೆಸರ್ಗಳೂ ಆಗಿದ್ದಾರೆ.
ಮಕ್ಕಳು ಓದಿ ದೊಡ್ಡವರಾಗಿ ಎಂಬ ಶ್ರೇಷ್ಟ ವೃತ್ತಿಯ ಕೈ ಹಿಡಿಯುತ್ತಿರುವುದಕ್ಕೆ ಈ ಗ್ರಾಮದ ಜನರಿಗೆ ಹೆಮ್ಮೆ ಇದೆ.
ಮನೆಗೊಬ್ಬ ಶಿಕ್ಷಕಕರು:
ಹುಲ್ಲೂರು ಗ್ರಾಮದಲ್ಲಿ ೧೩೮೦ ಮನೆ ಇದ್ದು, ೮೫೭ ಕುಟುಂಬಗಳು ವಾಸಿಸುತ್ತಿವೆ. ೫೫೪೨ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ೫೩೫ ಪ್ರಾಥಮಿಕ ಶಿಕ್ಷಕರು, ೪೫ ಪ್ರೌಢಶಾಲೆ ಶಿಕ್ಷಕರು, ೧೦ ಜನ ಉಪನ್ಯಾಸಕರಿದ್ದಾರೆ.
ರಾಷ್ಟ್ರ, ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರೂ ಇಲ್ಲಿದ್ದಾರೆ. ಜಿಲ್ಲೆ, ಹೊರ ಜಿಲ್ಲೆಗಳಲ್ಲಿಯೂ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇಡೀ ಬದುಕನ್ನೇ ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕಾಗಿಯೇ ಮೀಸಲಿಟ್ಟಿರುವ ಹಲವು ಶಿಕ್ಷಕರೂ ಇಲ್ಲಿ ಕಾಣಸಿಗುತ್ತಾರೆ.
ಇದಲ್ಲದೆ, ೧೦ ಮುಖ್ಯ ಶಿಕ್ಷಕರು, ೬ ಉಪನ್ಯಾಸಕರು, ಸೇರಿ ಒಟ್ಟು ೪೦ ನಿವೃತ್ತ ಶಿಕ್ಷಕರು ಊರಲ್ಲಿದ್ದಾರೆ. ಈ ಗ್ರಾಮದವರನ್ನು ಮದುವೆಯಾಗಿ ಬಂದ ಶಿಕ್ಷಕಿಯರನ್ನು ಲೆಕ್ಕ ಹಾಕಿದರೆ ಸಂಖ್ಯೆ ಇನ್ನೂ ಹೆಚ್ಚುತ್ತದೆ.
ದಿ. ಬಿ.ಜಿ. ಅಣ್ಣಿಗೇರಿ ಮೇಷ್ಟ ಪ್ರೇರಣೆ:
ಹುಲ್ಲೂರು ಗ್ರಾಮ ಆರ್ಥಿಕವಾಗಿ ಅಷ್ಟೇನೂ ಅಭಿವೃದ್ಧಿ ಹೊಂದಿಲ್ಲ. ಬಹುತೇಕರು ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.
ನೆರೆಯ ಗ್ರಾಮ ಮುದೆನಗುಡಿಯ ದಿ.ಬಿ.ಜಿ.ಅಣ್ಣಿಗೇರಿ ಶಿಕ್ಷಕರರ ಪ್ರೇರಣೆ ಹಾಗೂ ತಮ್ಮ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಹುಲ್ಲೂರ ಗ್ರಾಮದಲ್ಲಿ ಇಷ್ಟೊಂದು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಈ ಗ್ರಾಮದಲ್ಲಿ ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರ ಸಂಖ್ಯೆಯೂ ದೊಡ್ಡದಿದೆ.
ವಿವಿಧ ಕ್ಷೇತ್ರದಲ್ಲೂ ಛಾಪು:
ಶಿಕ್ಷಕರನ್ನು ಮಾತ್ರವಲ್ಲ ನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಕೃಷಿ ಕ್ಷೇತ್ರಕ್ಕೂ ಈ ಗ್ರಾಮ ಮಹತ್ವದ ಕೊಡುಗೆ ನಿಡುತ್ತಾ ಬಂದಿದೆ. ಪೊಲೀಸ್, ಸೈನಿಕರು, ವೈದ್ಯರು, ವಿಜ್ಞಾನಿಗಳು,ನ್ಯಾಯವಾದಿಗಳು, ಪ್ರಗತಿಪರ ಕೃಷಿಕರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು ಈ ಗ್ರಾಮದಲ್ಲಿದ್ದಾರೆ.
ಹುಲ್ಲೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ೩ ಜನ ಕೆಎಎಸ್ ಅಧಿಕಾರಿಗಳು, ೮ ವೈದ್ಯರು, ೧೦ ಇಂಜಿನಿಯರ್ಗಳು, ೨೫ ಯೋಧರು, ೫ ಪೊಲೀಸರು, ೪ ಗ್ರಾಮಲೆಕ್ಕಾಕಾರಿಗಳು, ೪ ಕೃಷಿ ಇಲಾಖೆ, ಅಂಚೆ, ಜಲಾನಯನ, ಆಹಾರ, ಸಮಾಜ ಕಲ್ಯಾಣ, ಆರೋಗ್ಯದಂತಹ ನಾನಾ ಇಲಾಖೆಗಳು, ಬ್ಯಾಂಕ್, ಪ್ರಥಮ, ದ್ವಿತೀಯ ದರ್ಜೆ ನೌಕರರಾಗಿ ೫೦ಕ್ಕೂ ಹೆಚ್ಚು ಜನ ಸೇವೆ ಸಲ್ಲಿಸುತ್ತಿದ್ದಾರೆ.