ವಿದ್ಯಾರ್ಥಿಗಳ ಮಿಂಚಿನ ಪ್ರತಿಭಟನೆ ಹಿನ್ನಲೆ
ಪ್ರತಿಭಟನಾನಿರತರಿಗೆ ಕುಲಪತಿ ಮೌಖಿಕ ಭರವಸೆ
ಧಾರವಾಡ prajakiran.com : ಸೆ. 11ರಿಂದ 19ರವರೆಗೆ ನಡೆಯಬೇಕಿದ್ದ ಬಿ ಎಡ್ ಪ್ರಥಮ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಲು ಕರ್ನಾಟಕ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಶನಿವಾರ (ಸೆ.5ರಂದು) ನೂರಾರು ವಿದ್ಯಾರ್ಥಿಗಳು ಮಿಂಚಿನ ಪ್ರತಿಭಟನೆ ನಡೆಸಿ ತಮ್ಮಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈ ಕುರಿತು ಪ್ರತಿಭಟನಾನಿರತರರಿಗೆ ಕವಿವಿ ಕುಲಪತಿ ಡಾ. ವಿಶ್ವನಾಥ ಎಂ. ಮೌಖಿಕ ಭರವಸೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಸಾವಿರಾರು ಬಿಎಡ್ ವಿದ್ಯಾರ್ಥಿಗಳು ಹಾಗೂ ಬಿ ಎಡ್ ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತೆ ಗೊಂದಲಕ್ಕೆ ಸಿಲುಕಿವೆ.
ಈ ಕುರಿತು ಪ್ರಜಾಕಿರಣ.ಕಾಮ್ ದೊಂದಿಗೆ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಡಾ. ರವೀಂದ್ರನಾಥ ಕದಂ ಅವರು ಕುಲಪತಿಗಳು ನಮಗೆ ಲಿಖಿತವಾಗಿ ತಿಳಿಸಿದ ನಂತರ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗುವುದು.
ಸೆ. 7ರಂದು ಸೋಮವಾರ ಮೌಲ್ಯಮಾಪನ ವಿಭಾಗಕ್ಕೆ ಪತ್ರ ದೊರೆಯುವ ಸಾಧ್ಯತೆಗಳಿವೆ. ನಂತರ ಪರೀಕ್ಷಾ ದಿನಾಂಕ ಮುಂದೂಡುವ ಕುರಿತು ತೀರ್ಮಾನ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿ ಎಡ್ ವೃತ್ತಿ ಶಿಕ್ಷಣವಾಗಿರುವುದರಿಂದ ಪರೀಕ್ಷೆ ಬರೆಯುವವರು ಬರೆಯಲಿ, ಬರೆದು ಹೆಚ್ಚು ಅಂಕ ಗಳಿಸಲಿ. ಆದರೆ ಪರೀಕ್ಷೆ ಬರೆಯಲು ಇಷ್ಟವಿಲ್ಲದವರಿಗೆ ಯಾವ ಆಧಾರದ ಮೇಲೆ ಪ್ರಮೋಟ್ ಮಾಡಬೇಕು ಎಂಬುದು ಚರ್ಚೆ ನಡೆಯಲಿದೆ.
ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಟ್ಟು ಆರು ಸಾವಿರ ಬಿ ಎಡ್ ವಿದ್ಯಾರ್ಥಿಗಳಿದ್ದಾರೆ. ಕೆಲವರು ಬೇಕು ಕೆಲವರು ಬೇಡ ಎಂದು ಮನವಿ ಮಾಡುತ್ತಿದ್ದಾರೆ.
ಈ ಬಗ್ಗೆ ವಿಶ್ವವಿದ್ಯಾಲಯಕ್ಕೆ ಸಾಕಷ್ಟು ಮನವಿ ಪತ್ರಗಳು ಬಂದಿದ್ದು, ಪರೀಕ್ಷೆ ನಡೆಸುವಂತೆ ನೂರಾರು ಈಮೇಲ್ ಬಂದಿವೆ. ಇದರಿಂದಾಗಿ ವಿಶ್ವವಿದ್ಯಾಲಯವು ಕೂಡ ಗೊಂದಲಕ್ಕೆ ಸಿಲುಕಿದೆ.
ಕೇವಲ ನೂರಾರು ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದರೆ ಆರು ಸಾವಿರ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಲಿದೆ ಎಂದು ಅವರು ಪ್ರಜಾಕಿರಣ.ಕಾಮ್ ಎದುರು ಕಳವಳ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ದಿನಾಚರಣೆ ದಿನವೇ ಭಾವಿ ಶಿಕ್ಷಕರು ಪ್ರತಿಭಟನೆ ಹಾದಿ ತುಳಿದಿರುವುದು ಬೇಸರದ ಸಂಗತಿಯಾಗಿದೆ. ಈ ಬಗ್ಗೆ ಸೆ. 9ರಂದು ನಡೆಯುವ ಡೀನ್ಸ್ ಕಮಿಟಿ ಮೀಟಿಂಗ್ ನಲ್ಲಿ ಚರ್ಚೆಗೆ ಬಂದರೆ ಚರ್ಚಿಸಲಾಗುವುದು ಎಂದರು.
ಈ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಅಧಿಕೃತ ಆದೇಶ ಹೊರಬೀಳುವರೆಗೆ ಬಿಎಡ್ ಪರೀಕ್ಷೆ ನಡೆಯುತ್ತಾ ಇಲ್ಲವೇ ಮುಂದೂಡುತ್ತಾ ಎಂಬ ಗೊಂದಲ ವಿದ್ಯಾರ್ಥಿಗಳಿಗೆ ಹಾಗೂ ಬಿ ಎಡ್ ಕಾಲೇಜ್ ಗಳಿಗೆ ಇದ್ದದ್ದೆ ಎಂದರೆ ತಪ್ಪಾಗಲಾರದು.