ಧಾರವಾಡ prajakiran.com : ರಾಜ್ಯ ಸರಕಾರ ಖಾಸಗಿ ಶಾಲೆಗಳ ಸಾವಿರಾರು ಶಿಕ್ಷಕರ ನೆರವಿಗೆ ಧಾವಿಸದಿರುವುದು ಖೇದಕರ ಸಂಗತಿ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಹೇಳಿದ್ದಾರೆ.
ರಾಜ್ಯದಲ್ಲಿ ೨೦ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ಕಾಲೇಜುಗಳಿವೆ. ಇದರಲ್ಲಿ ೫೦ ಸಾವಿರಕ್ಕೂ ಹೆಚ್ಚು ಶಿಕ್ಷಕ- ಉಪನ್ಯಾಸಕರಿದ್ದಾರೆ. ಇವರು ಕಳೆದ ೫-೬ ತಿಂಗಳಿನಿಂದ ಸಂಬಳವಿಲ್ಲದೇ ಸಂಕಷ್ಟದಲ್ಲಿದ್ದಾರೆ.
ಕೆಲವು ಶಿಕ್ಷಕರು ಸಂಬಳ ಇಲ್ಲದ ಪರಿಣಾಮ ಜೀವನ ನಿರ್ವಹಣೆಗೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಸ್ಥಾಪಿಸಿದರೆ ಬಿಜೆಪಿ ಪಕ್ಷದ ಕೆಲವರು ಅದೂ ಕೂಡಾ ಉದ್ಯೋಗ ತಾನೇ ಎನ್ನುತ್ತಿದ್ದಾರೆ. ಇದೇನಾ ಶಿಕ್ಷಕರ ಮೇಲೆ ಬಿಜೆಪಿಯವರಿಗೆ ಇರುವ ಗೌರವ?.
ಖಾಸಗಿ ಶಾಲೆಗಳ ಆಡಳಿತ ಮಂಡಳಿ ಶಿಕ್ಷಕರಿಗೆ ಉಪನ್ಯಾಸಕರಿಗೆ ನೀಡುತ್ತಿರುವ ವೇತನ ನೋಡಿದರೆ ಎಂತವರಿಗೂ ಬೇಸರವಾಗುತ್ತದೆ. ಸರಿಯಾದ ಸಂಬಳ ಬಾರದೇ ಬದುಕು ನಡೆಸುವ ಶಿಕ್ಷಕರ ಪರಿಸ್ಥಿತಿ ಅಯೋಮಯವಾಗಿದೆ.
ಶಾಲೆಗೆ ಮಕ್ಕಳು ಬಾರದಿದ್ದರೂ ಸಹ ಶಿಕ್ಷಕರನ್ನು ಶಾಲೆಗೆ ಕಳಿಸುವ ಮೂಲಕ ಶಿಕ್ಷಕರನ್ನು ಬೇಕೆಂದೇ ಶೋಷಣೆ ಮಾಡಲಾಗುತ್ತಿದೆ. ಆದರೂ ಶಿಕ್ಷಕರು ಬದ್ಧತೆಯಿಂದ ತಮ್ಮ ಕೆಲಸ ಮುಂದುವರೆಸಿದ್ದಾರೆ.
ಆದರೆ, ರಾಜ್ಯ ಸರ್ಕಾರ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ಧೋರಣೆ ನೋಡಿದರೆ ಈ ಬಗ್ಗೆ ಎಳ್ಳಷ್ಟಾದರೂ ಕಾಳಜಿ ಇದೆಯೇ ಎನ್ನುವಂತಾಗಿದೆ.
ಶಿಕ್ಷಣ ಸಚಿವರು ತಮ್ಮ ಪ್ರಚಾರಕ್ಕೆ ಅಗತ್ಯವಿರುವ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ. ಇನ್ನೊಂದೆಡೆ ಪಿಯುಸಿ ಉಪನ್ಯಾಸಕರನ್ನು ನೇಮಿಸಿಕೊಳ್ಳದೇ ಸರಕಾರ ಅಭ್ಯರ್ಥಿಗಳನ್ನು ಏನು ಮಾಡಲು ಹೊರಟಿದೆ ಎಂಬ ಅನುಮಾನ ಕಾಡುತ್ತಿದೆ.
ಎಲ್ಲ ವರ್ಗದ ಸಂತ್ರಸ್ತರಿಗೆ ಸರ್ಕಾರ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಮಾತ್ರ ಯಾವುದೇ ಅನುಕೂಲ ಆಗಿಲ್ಲ.
ಶಿಕ್ಷಕರಿಗೂ ಕುಟುಂಬ ಸಾಗಿಸುವ ಹೊಣೆಯಿದೆ. ಇವರ ಹೊಣೆ ಬಿಜೆಪಿ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲವೇ ಎಂದು ನೀರಲಕೇರಿ ಪ್ರಶ್ನಿಸಿದ್ದಾರೆ.
ಕೋವಿಡ್ ನಿಂದಾಗಿ ಶಾಲೆಗಳನ್ನು ತೆರೆಯಲು ಅವಕಾಶವಿಲ್ಲದ ಕಾರಣ, ನೂರಾರು ಶಿಕ್ಷಕರ ಬದುಕು ದುಸ್ತರವಾಗಿದೆ. ಈ ಕೂಡಲೇ ಸರ್ಕಾರ ಇಂತಹ ಶಿಕ್ಷಕರ ನೆರವಿಗೆ ಧಾವಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.