ಧಾರವಾಡ prajakiran. com : ರಾಷ್ಟ್ರೀಯ ರೈತ ದಿನಾಚರಣೆ ದಿನವೇ ಸಾಲದ ಬಾಧೆಯಿಂದ ಬೇಸತ್ತ ರೈತನೋರ್ವ ಆತ್ಮಹತ್ಯೆಗೆ ಶರಣಾದ ಪ್ರಕರಣ ಧಾರವಾಡ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಚಂದ್ರಪ್ಪ ರುದ್ರಪ್ಪ ವಾಲೀಕಾರ (೬೨) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗೊತ್ತಾಗಿದೆ.
ಗ್ರಾಮದಲ್ಲಿ ೫ ಎಕರೆ ಜಮೀನು ಹೊಂದಿದ್ದ ರೈತ ರಾಮಚಂದ್ರಪ್ಪ, ಧಾರವಾಡದ ಎಸ್ಬಿಎಂನಿಂದ ಕೃಷಿ ಚಟುವಟಿಕೆಗಳಿಗೆ ೧ ಲಕ್ಷ ರೂಪಾಯಿ ಸಾಲ ಮತ್ತು ೧೨ ವರ್ಷಗಳ ಹಿಂದೆ ಟ್ರ್ಯಾಕ್ಟರ್ ಖರೀದಿಸಿದ ೧೩ ಲಕ್ಷ ರೂಪಾಯಿ ಸಾಲ ಮರುಪಾವತಿಸಲು ಸಾಧ್ಯವಾಗದೇ ಬೇಸತ್ತಿದ್ದನು.
ಅಲ್ಲದೇ ಈತನ ಜಮೀನಿನ ವ್ಯಾಜ್ಯ ಪ್ರಕರಣ ತಾಲೂಕಾ ಭೂ ನ್ಯಾಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆ ರಾತ್ರಿ ಮನೆ ಮುಂದಿನ ಛಾವಣಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತನಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಗ್ರಾಮಕ್ಕೆ ಪಿಎಸ್ಐ ಸುಮಾ ನಾಯಕ ಭೇಟಿ ನೀಡಿದ್ದರು.
ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.