ಬೆಂಗಳೂರು prajakiran.com : ಮ್ಯಾಲ ಮಳಿ, ಕೆಳಗ ನೀರು ಏನ್ ಮಾಡೋದು ಎನ್ ಉಣ್ಣೋದು ತಿನ್ನೊದು ಎಂದು ಮಳೆ ಹೊಡೆತಕ್ಕೆ ಎಲ್ಲವೂ ಕಳೆದುಕೊಂಡ ಜನತೆ ಕಣ್ಣೀರು ಹಾಕುತ್ತಿದ್ದಾರೆ.
ಉತ್ತರಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಸಾವಿರಾರು ರೈತರು, ಬೀದಿಪಾಲಾದ ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.
ಅದರಲ್ಲೂ ಕಾಳಜಿ ಕೇಂದ್ರಗಳಲ್ಲಿ ರಾಜ್ಯ ಸರಕಾರದ ಆದೇಶ ಪುಸ್ತಕದ ಬದನೆಕಾಯಿ ಆಗಿರುವುದು ಬಟಾಬಯಲಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪೂರದ ಕಾಳಜಿ ಕೇಂದ್ರದಲ್ಲಿ
ಬಾಣಂತಿಯೊಬ್ಬಳು ಬೆಳಗ್ಗೆ ಉಪಹಾರವಿಲ್ಲದೆ, ಸಂಜೆ 5.30ಕ್ಕೆ ಊಟ ಮಾಡಿದ್ದಾರೆ. ಅಲ್ಲದೆ, ಬೆಳಗಿನ ಉಪಹಾರ ಮಧ್ಯಾಹ್ನ ಎರಡು ಗಂಟೆಗೆ ಬಂದಿದೆ ಎಂಬುದು ಜಗಜಾಹೀರವಾಗಿದೆ ಎಂದು ಕಿಡಿಕಾರಿದರು.
ಅದೇ ರೀತಿ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕಮತಗಿ ಗ್ರಾಮದಲ್ಲಿ ಕೇವಲಅನ್ನ ಸಾರು ಕೊಟ್ಟಿದ್ದಾರೆ. ಆ ಸಾರಿನಲ್ಲಿ ನೀರು ಬಿಟ್ಟರೆ ಬೇರೆನೂ ಇಲ್ಲ ಎಂದು ಅನ್ನದಾತರು ಕಿಡಿಕಾರಿದ್ದಾರೆ
ಇದೇ ವೇಳೆ ಮೂಕ ಪ್ರಾಣಿಗಳು ಪರದಾಡುತ್ತಿವೆ. ಹೊಟ್ಟೆಗೆ ಊಟ ಇಲ್ಲದ ಜನತೆ ಅವುಗಳನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣ ಒತ್ತೆಯಿಟ್ಟು ರಕ್ಷಿಸಿದ ಘಟನೆ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಇಂತಹ ಹೃದಯ ಕಲಕುವ ಘಟನೆ ಉತ್ತರಕರ್ನಾಟಕದಲ್ಲಿ ಹತ್ತು ಹಲವು ನಡೆಯುತ್ತಿವೆ. ತುತ್ತು ಅನ್ನಕ್ಕಾಗಿ ಜನತೆ ಅಕ್ಷರಶಃ ಪರದಾಡುತ್ತಿದ್ದಾರೆ. ಜನರ ಕಣ್ಣೀರು ಶಾಪವಾಗಿ ಸರಕಾರಕ್ಕೆ ತಟ್ಟದೆ ಇರದಿರುವುದು ಸುಳ್ಳಲ್ಲ.
ಕಂದಾಯ ಸಚಿವ ಆರ್. ಅಶೋಕ್ ಕಲಬುರಗಿ ಪ್ರವಾಸದ ವೇಳೆ ಅಲ್ಲಿಯ ಜಿಲ್ಲಾಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದರು. ಕಾಳಜಿ ಕೇಂದ್ರದ ಬೆಳಗ್ಗೆ ಉಪ್ಪಿಟ್ಟು, ಕೇಸರಿಬಾತ್, ಊಟದಲ್ಲಿ ಚಪಾತಿ, ಪಲ್ಯ, ಅನ್ನ, ಸಾರು, ಮೊಟ್ಟೆ, ಹಪ್ಪಳ ಕೊಡಬೇಕು ಎಂದು ಹೇಳಿದ್ದರು.
ಆದರೆ ಇದು ಕೇವಲ ನಾಮಕಾವಾಸ್ತೆ ಎಂಬಂತೆ ಆಗಿರುವುದು ಕಾಳಜಿ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.