ಧಾರವಾಡ prajakiran.com : ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಪಟ್ಟಣದಲ್ಲಿ ವಿವಿಧ ಕೂಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯ ವಲಸೆ ಕಾರ್ಮಿಕರು ಲಾರಿ ಮೂಲಕ ಅನಧಿಕೃತವಾಗಿ ಸಂಚರಿಸುತ್ತಿದ್ದಾಗ ಮಂಗಳವಾರ ಬೆಳಿಗ್ಗೆ ಜಿಲ್ಲೆಯ ತೇಗೂರ ಚೆಕ್ಪೋಸ್ಟ್ ನಲ್ಲಿ ಅವರನ್ನು ತಡೆದು ನಗರದ ಕಲ್ಯಾಣ ಮಂಟಪದಲ್ಲಿ ಆಶ್ರಯ ಕಲ್ಪಿಸಲಾಗಿತ್ತು.
ಮಹಾರಾಷ್ಟ್ರ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ರಾಯಗಡ ಜಿಲ್ಲಾಧಿಕಾರಿಯೊಂದಿಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ವಲಸೆ ಕಾರ್ಮಿಕರನ್ನು ಮರಳಿ ಅವರ ತವರು ಜಿಲ್ಲೆ ರಾಯಗಡಕ್ಕೆ ಕಳುಹಿಸಲು ಎರಡು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಿದರು.
ಧಾರವಾಡ ಉಪ ವಿಭಾಗಾಧಿಕಾರಿ ಮಹಮ್ಮದ ಜುಬೇರ ಮತ್ತು ತಹಶೀಲ್ದಾರ ಸಂತೋಷ ಬಿರಾದಾರ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಳು ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದರು.
ಅವರಿಗೆ ಊಟ, ಕುಡಿಯುವ ನೀರು, ಮಾಸ್ಕ್, ಸ್ಯಾನಿಟೈಜರ್ ನೀಡಲಾಯಿತು. ಮಕ್ಕಳಿಗೆ ಹಾಲು, ಬಿಸ್ಕೆಟ್ ವಿತರಿಸಲಾಯಿತು.
ಧಾರವಾಡದಿಂದ ವಿಶೇಷ ಬಸ್ ಮೂಲಕ ತೆರಳುವ ಕಾರ್ಮಿಕರನ್ನು ನಿಪ್ಪಾಣಿ ತಾಲೂಕಿನ ಕೊಗನಹಳ್ಳಿ ಚೆಕ್ಪೋಸ್ಟ್ ಹತ್ತಿರ ಬರುವ ಮಹಾರಾಷ್ಟ್ರ ಸರಕಾರದ ಬಸ್ ಅವರನ್ನು ಕರೆದುಕೊಂಡು ಹೋಗಿ ರಾಯಗಡ್ ಕ್ಕೆ ನಾಳೆ ಬೆಳಿಗ್ಗೆ ತಲುಪಿಸಲಿದೆ.
ಅನಧಿಕೃತವಾಗಿ ಸರಕು ವಾಹನದ ಮೂಲಕ ಮಾನವ ಸಾಗಣೆ ಮಾಡುತ್ತಿದ್ದ ಬೆಳಗಾವಿ ನೋಂದಣಿ ಇರುವ ಲಾರಿ ಚಾಲಕನ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡಲಾಗಿದೆ.
ಮಹಾರಾಷ್ಟ್ರದ ಅತ್ಯಂತ ಹಿಂದುಳಿದ ಆದಿವಾಸಿ ಜನಾಂಗದವರು ಉದ್ಯೋಗ ಅರಸಿ ದೇಶದ ವಿವಿಧ ಜಿಲ್ಲೆಗಳಿಗೆ ಪ್ರತಿ ವರ್ಷ ಹೋಗುತ್ತಾರೆ.
ಅದರಂತೆ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಆಗಮಿಸಿದ್ದ ಸುಮಾರು ೬೭ ಜನರ ತಂಡ ಲಾಕ್ಡೌನ್ ಹಿನ್ನಲೆಯಲ್ಲಿ ಉದ್ಯೋಗ, ಆಹಾರ ಕೊರತೆಯಿಂದ ಕಾಲ್ನಡಿಗೆಯಿಂದ ಮರಳಿ ಮಹಾರಾಷ್ಟ್ರಕ್ಕೆ ತೆರಳುವಾಗ ಮಾರ್ಗಮದ್ಯೆ ಸಿಕ್ಕ ಲಾರಿ ಹತ್ತಿ ಅವರ ಊರಿಗೆ ಹೊರಟಿದ್ದರು.
ಮಂಗಳವಾರ ಬೆಳಿಗ್ಗೆ ತೇಗೂರ ಚೆಕ್ಪೋಸ್ಟ್ ದಲ್ಲಿ ಚೆಕ್ಪೋಸ್ಟ್ ಸಿಬ್ಬಂದಿ ಲಾರಿ ಪರಿಶೀಲಿಸಿದಾಗ ಅದರಲ್ಲಿ ಜನರ ಸಾಗಣೆ ಇರುವದನ್ನು ಸಿಬ್ಬಂದಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಾರ್ಮಿಕರಿಗೆ ಕಲ್ಯಾಣ ಮಂಟಪದಲ್ಲಿ ವಸತಿ ನೀಡಿ, ಅವರಿಗೆ ಆಹಾರ, ನೀರು ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲು ಆದೇಶಿಸಿದ್ದರು.
ಅದರಂತೆ ಬೆಳಿಗ್ಗೆ ಅವರಿಗೆ ಉಪಹಾರ, ಮಧ್ಯಾಹ್ನ ಊಟ ನೀಡಿ, ರಾತ್ರಿ ಊಟ, ನೀರು ಕಲ್ಪಿಸಿ ಬಿಳ್ಕೋಡಲಾಯಿತು. ಇದರಿಂದಾಗಿ ಆದಿವಾಸಿ ವಲಸಿಗ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿದ್ದು ಕಂಡು ಬಂತು.