ಬೆಳಗಾವಿ prajakiran.com : ಕರೋನಾ ಲಾಕ್ ಡೌನ್ ಎಫೆಕ್ಟ್ ದೇಶದ ಹಾಗೂ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಿಗೂ ತಟ್ಟಿದೆ. ಇದರಿಂದಾಗಿ ದೇವಸ್ಥಾನಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿರುವುದು ಬೆಳಕಿಗೆ ಬರುತ್ತಲೇ ಇದೆ.
ಅದರಲ್ಲೂ ಉತ್ತರ ಕರ್ನಾಟಕ ಭಾಗದ ಕೋಟ್ಯಾಂತರ ಜನರ ಆರಾಧ್ಯ ದೈವವಾಗಿರುವ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆದಾಯಕ್ಕೂ ಪೆಟ್ಟು ಬಿದ್ದಿದೆ.
ಆದಿಶಕ್ತಿಯ 64 ಶಕ್ತಿಪೀಠಗಳಲ್ಲಿ ಒಂದಾಗಿರುವ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಮೂರು ತಿಂಗಳಲ್ಲಿಯೇ ಬರೋಬ್ಬರಿ 6 ಕೋಟಿ ರೂಪಾಯಿ ನಷ್ಟವಾಗಿದೆ.
ಈ ದೇವಸ್ಥಾನಕ್ಕೆ ಉತ್ತರ ಕರ್ನಾಟಕ ಭಾಗವಷ್ಟೇ ಅಲ್ಲದೆ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದ ಅತಿ ಹೆಚ್ಚು ಭಕ್ತರನ್ನು ಹೊಂದಿರೋ ಯಲ್ಲಮ್ಮ ದೇವಾಲಯಕ್ಕೆ
ಮಾರ್ಚ್ ತಿಂಗಳಲ್ಲಿ 4.48 ಕೋಟಿ ರೂಪಾಯಿ ಹಾನಿಯಾಗಿದೆ. ಅದೇ ರೀತಿ ಎಪ್ರಿಲ್ ತಿಂಗಳಲ್ಲಿ 78.68 ಲಕ್ಷ ರೂಪಾಯಿ ಹಾನಿಯಾದರೆ, ಮೇ ತಿಂಗಳಲ್ಲಿ 71 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.
ಕಳೆದ ವರ್ಷ ಮಾರ್ಚ, ಏಪ್ರಿಲ್, ಮೇ ತಿಂಗಳು ಸೇರಿ ಅಂದಾಜು 5 ಕೋಟಿ 98 ಲಕ್ಷದಷ್ಟು ಆದಾಯ ಸಂಗ್ರಹವಾಗಿತ್ತು.
ಆದರೆ ಈ ವರ್ಷ ಲಾಕಡೌನದಿಂದ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ಹೀಗಾಗಿ ಈ ಬಾರಿ ದೇವಾಲಯ ಭಕ್ತರು ಇಲ್ಲದೆ ಭಣಗುಡುತ್ತಿವೆ.
ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅರ್ಚಕರು, ಸಹಾಯಕರು ಸೇರಿ 80 ಜನ ಕೆಲಸ ಮಾಡುತ್ತಿದ್ದಾರೆ.
ಲಾಕ್ ಡೌನ್ ನಡುವೆಯೂ 80 ಜನರಿಗೆ ನೀಡುವ ವೇತನದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.