ಧಾರವಾಡ prajakiran.com : ಅವರು ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಆದ್ರೆ ಸಾಫ್ಟವೇರ್ ಕಡೆಗೆ ಒಲವು ತೋರಿಸಿ ನಂತರ ಸಾಫ್ಟವೇರ್ ಎಂಜಿನಿಯರ್ ಆದ್ರು. ಅಂದುಕೊಂಡಂತೆ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ರು.
ಅದಾದ ನಂತರ ಯುಎಸ್ಎ ಹಾಗೂ ಲಂಡನ್ ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ್ರು. ತಿಂಗಳಿಗೆ 3.50 ಲಕ್ಷ ವೇತನ ಕೂಡ ಇತ್ತು.
ಆದ್ರೆ ಅದೆಲ್ಲವನ್ನು ಬಿಟ್ಟು ಮಾತೃಭೂಮಿಯಲ್ಲೇ ಅದರಲ್ಲೂ ಕೃಷಿಯಲ್ಲೇ ಏನನ್ನಾದರೂ ಸಾಧನೆ ಮಾಡಬೇಕು ಎಂದು ಉದ್ಯೋಗ, ಹುದ್ದೆ ಎಲ್ಲವನ್ನೂ ಬಿಟ್ಟು ಮರಳಿ ಧಾರವಾಡಕ್ಕೆ ಬಂದು ಇದೀಗ ಸಾವಯವ ಕೃಷಿ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ನೀವು ದೃಶ್ಯಗಳಲ್ಲಿ ನೋಡುತ್ತಿರುವ ವ್ಯಕ್ತಿಯ ಹೆಸರು ನರಸನಗೌಡ ವೀರಾಪುರ. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನವರು. ಆದರೆ, 2016ರಿಂದ ಧಾರವಾಡದಲ್ಲಿ ವಾಸಿಸುತ್ತಿದ್ದಾರೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಬಳಿ 5 ಎಕರೆ ಹೊಲ ಖರೀದಿ ಹಿಡಿದು ಸಾಫ್ಟವೇರ್ ಎಂಜಿನಿಯರಿಂಗ್ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ.
ಐದು ಎಕರೆ ಜಾಗದಲ್ಲಿ ಎರಡು ಕೃಷಿ ಹೊಂಡ, ಒಂದು ಭಾವಿ, ಎರಡು ಪಾಲಿ ಹೌಸ್ ಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಎರಡು ಕೊಳವೆ ಭಾವಿಗಳನ್ನು ಕೊರೆಸಿದ್ದಾರೆ.
ಮೊದಲು ಒಂದು ವರ್ಷದ ಅವಧಿಯಲ್ಲಿ ಕೆಮಿಕಲ್ ಬಳಕೆ ಮಾಡಿ ತರಕಾರಿ ಬೆಳೆಯಲಾರಂಭಿಸಿದರು. ಆದರೆ, ಆ ತರಕಾರಿಗೆ ಸರಿಯಾಗಿ ಬೆಲೆ ಸಿಗದ ಕಾರಣ, ಮಾರನೇ ವರ್ಷ ಸಾವಯವ ಕೃಷಿ ಮೂಲಕ ತರಕಾರಿ ಬೆಳೆಯಲು ಆರಂಭಿಸಿದರು.
ಮುಸುಕು ಬದನೆ, ಬೆಂಡೆ, ಟೊಮ್ಯಾಟೋ, ಸೊಪ್ಪು, ಸೇವಂತಿಗೆ, ಪಪ್ಪಾಯಾ, ಮಾವು, ಬಾಳೆ, ಬದನೆ ಸೇರಿದಂತೆ ಇತ್ಯಾದಿ ತರಕಾರಿ ಬೆಳೆದು ಅದರಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ ಕೃಷಿ ಹೊಂಡದಲ್ಲಿ 5 ಸಾವಿರ ಮೀನುಗಳನ್ನು ಕೂಡ ಸಾಕಾಣಿಕ ಮಾಡುತ್ತಿದ್ದಾರೆ. ಅಣಬೆ ಕೃಷಿಯನ್ನೂ ಇದೀಗ ಕೈಗೆತ್ತಿಕೊಂಡಿದ್ದಾರೆ.
ವಿಚಿತ್ರ ಅಂದ್ರೆ ಇವರೇ ಧಾರವಾಡದಲ್ಲಿ ಸುಮಾರು 300-350 ಗ್ರಾಹಕರನ್ನು ಹುಟ್ಟು ಹಾಕಿದ್ದಾರೆ. ಸ್ವತಃ ಇವರೇ VKF Agree Forms ಎಂದು ಮೊಬೈಲ್ ಆ್ಯಪ್ ಕೂಡ ಮಾಡಿದ್ದಾರೆ. ಆ ಮೂಲಕ ತಾವು ಬೆಳೆದ ಸಾವಯವ ತರಕಾರಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಇವರು ತಮ್ಮ ಸಿಬ್ಬಂದಿ ಮೂಲಕ ಮನೆ ಮನೆಗೆ ಗ್ರಾಹಕರಿಗೆ ತರಕಾರಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಸ್ವಯಂ ಉದ್ಯೋಗ ಕೈಗೊಂಡು ನರಸನಗೌಡ ತಿಂಗಳಿಗೆ 1.50 ಲಕ್ಷ ಆದಾಯ ಗಳಿಕೆ ಮಾಡುತ್ತಿದ್ದಾರೆ.
ಯುವ ಜನರು ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ನರಸನಗೌಡ ಅವರು ತೋಟಗಾರಿಕಾ ಇಲಾಖೆಯಿಂದ ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸಾವಯವ ಕೃಷಿಯಲ್ಲಿ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿದ್ದಾರೆ.
ಎಸಿ ರೂಮು ಹಾಗೂ ಒಳ್ಳೆಯ ಸಂಬಳ ಬಿಟ್ಟು ಕೃಷಿ ಮಾಡುತ್ತಿರುವ ನರಸನಗೌಡ ಇತರ ಯುವಕರಿಗೆ ಮಾದರಿ ಎನಿಸುತ್ತಾರೆ.