ಧಾರವಾಡ prajakiran.com : ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಅಂದಿನ ಉಪನಗರ ಪೊಲೀಸ್ ಠಾಣೆ ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಹೈಕೋರ್ಟ್ ಮೆಟ್ಟಿಲು ಹತ್ತಿದೆ.
ಬುಧವಾರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಎಕ ಸದಸ್ಯ ಪೀಠದ ನ್ಯಾಯಾಧೀಶರು, ಸಿಬಿಐಗೆ ತಕರಾರರು ಸಲ್ಲಿಸಲು ಕಾಲಾವಕಾಶ ನೀಡಿ, ಒಂದು ವಾರ ವಿಚಾರಣೆ ಮುಂದೂಡಿದೆ.
ಯೋಗೀಶಗೌಡ ಕೊಲೆ ನಡೆದ ಸಂದರ್ಭದಲ್ಲಿ ಟಿಂಗರೀಕರ್ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿರುವ ಹಿನ್ನಲೆಯಲ್ಲಿ ಬಂಧನ ಭೀತಿಯಲ್ಲಿದ್ದಾರೆ.
ಟಿಂಗರೀಕರ್ ಈ ಮೊದಲು ಧಾರವಾಡದ ೪ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ಮಾಡಿದ್ದ ಜಿಲ್ಲಾ ನ್ಯಾಯಾಲಯ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಮತ್ತೆ ಹೈಕೋರ್ಟ್ ಮೆಟ್ಟಿಲು ಹತ್ತಿರುವ ಟಿಂಗರಿಕರ್ ಅವರಿಗೆ ನಿರೀಕ್ಷಣಾ ಜಾಮೀನು ಸಿಗುತ್ತಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.
ಕಳೆದ ಒಂದು ತಿಂಗಳಿಂದಅನಾರೋಗ್ಯದ ಮೇಲೆ ದೀರ್ಘ ರಜೆಯಲ್ಲಿಯಲ್ಲಿರುವ ಪೊಲೀಸ್ ಇನ್ಸಪೆಕ್ಟರ್ ಚನ್ನಕೇಶವ ಟಿಂಗರೀಕರ್ ತಂದೆ ಬಸಪ್ಪ ಟಿಂಗರೀಕರ್(71) ನಿನ್ನೆಯಷ್ಟೇ ಹೃದಯಾಘಾತದಿಂದ ಧಾರವಾಡದ ಮಲಪ್ರಭಾ ನಗರದಲ್ಲಿ ನಿಧನ ಹೊಂದಿದ್ದರು.
ಆದರೆ ಕೊನೆ ಕ್ಷಣದವರೆಗೂ ಅವರು ಬರುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದರು ಎನ್ನಲಾಗಿದೆ.