ಧಾರವಾಡ prajakiran.com : ರೈತರ ಬಳಿ ಶೇ 10 ರಷ್ಟು ಕಮಿಷನ್ ವಸೂಲಿಯ ಮೂಲಕ ಹಗಲು ದರೋಡೆಗೆ ಇಳಿದಿದ್ದ 20ಕ್ಕೂ ಹೆಚ್ಚು ಮಾವಿನ ಹಣ್ಣಿನ ದಲಾಲಿಗಳಿಗೆ ಧಾರವಾಡ ಎಪಿಎಂಸಿ ಕಾರ್ಯದರ್ಶಿ ಕೊನೆಗೂ ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ ನೀಡಿದವರ ವಿವರ ಹೀಗಿದೆ : ದಾವಲ್ ಸಾಬ ಎ ಭಾಗವಾನ್ (ಡಿಎಬಿ), ನೂರ್ ಅಹ್ಮದ್ ಮುಸ್ತಫಾ, ಮೋಯಿನ್ ಫ್ರುಟ್ ಟ್ರೇಡರ್ಸ್ , ಎಂ ಎ ಎಂ ಫ್ರುಟ್ಸ್, ಜಮಾದಾರ ಫ್ರುಟ್ಸ್ , ಆಸ್ಪಕ್ ಮೀರಜಕರ್, ಮೌಲಾಲಿ ದಾಸ್ತಿಕೊಪ್ಪ, ನೂರ್ ಅಹ್ಮದ ಹಜರತ್ ಮುಸ್ತಫಾ, ಮೈನೋದ್ದಿನ ಡಿ ಭಾಗವಾನ್, ನಾಯಕ್ ಪ್ರೂಟ್, ಫಾರೂಕ್ ಕಿತ್ತೂರ, ಸುಲೇಮಾನ್ ಮುನವಳ್ಳಿ ಹೀಗೆ ೨೦ಕ್ಕೂ ಹೆಚ್ಚು ದಲ್ಲಾಲಿಗಳು ಹೀಗೆ 20 ಕ್ಕೂ ಹೆಚ್ಚು ದಲಾಲಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.
ಎಪಿಎಂಸಿ ಕಾರ್ಯದರ್ಶಿಗಳು ಕೊನೆಗೂ ದಲಾಲಿಗಳಿಗೆ ನೋಟಿಸ್ ನೀಡಿರುವುದನ್ನು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೋರವರ ಸ್ವಾಗತಿಸಿದ್ದಾರೆ.
ಈ ಬಗ್ಗೆ ಧಾರವಾಡ ಎಪಿಎಂಸಿ ಕಾರ್ಯದರ್ಶಿ ಹಾಗೂ ಧಾರವಾಡ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರಿಗೆ ಮಾವಿನ ಹಣ್ಣಿನ ದಲಾಲಿಗಳ ಹಗಲು ದರೋಡೆ ಕುರಿತು ಮೇ 20ರಂದು ಲಿಖಿತ ದೂರು ನೀಡಲಾಗಿತ್ತು.
ಆದರೂ ಅವರ ವಿರುದ್ದ ಶಿಸ್ತುಕ್ರಮಕ್ಕೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಲೇ ಬಂದಿದ್ದರು. ಕೊನೆಗೆ ಹೋರಾಟದ ಹಾದಿ ಹಿಡಿಯುವ ಸುಳಿವು ಅರಿತು ಮೇ 29ರಂದು ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದಾರೆ.
ಆದರೆ ಅಷ್ಟಕ್ಕೆ ಸೀಮಿತಗೊಳಿಸದೆ ಅವರ ಪರವಾನಿಗೆ ರದ್ದು ಪಡಿಸಿ, ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೊದಲೇ ಲಾಕ್ ಡೌನ್ ನಿಂದ ತತ್ತರಿಸಿ ಹೋಗಿರುವ ಧಾರವಾಡ ಜಿಲ್ಲೆಯ ಮಾವು ಬೆಳೆಗಾರ ರೈತರ ನೆರವಿಗೆ ಧಾವಿಸುವ ಮೂಲಕಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೋರವರ ಒತ್ತಾಯಿಸಿದ್ದಾರೆ.
ಘಟನೆ ವಿವರ : ಧಾರವಾಡದ ಯರಿಕೊಪ್ಪ ಕ್ರಾಸನಲ್ಲಿರುವ ಮಾವಿನ ಹಣ್ಣಿನ ಕಮಿಷನ್ ಎಜೆಂಟ್ಗಳು (ದಲ್ಲಾಲಿಗಳು) ರೈತರಿಂದ ಕನಿಷ್ಟ ಶೇ ೧೦ರಿಂದ ೧೨ ಪ್ರತಿಶತ ಕಮಿಷನ್ ವಸೂಲಿ ಮಾಡುತ್ತಿರುವ ಅಕ್ರಮವನ್ನು ಬಯಲಿಗೆ ಎಳೆದಿದ್ದರು.
ಗಾಡಿಯಿಂದ ಅಂಗಡಿಗೆ ಮಾವಿನ ಹಣ್ಣನ್ನು ಹಚ್ಚಿಕೊಳ್ಳಲು ಒಂದು ಕ್ರೇಟ್ಗೆ ೩ ರೂಪಾಯಿ, ಲೌಡಿಂಗ್, ಅನ್ ಲೌಡಿಂಗ್ ಹಣ ವಸೂಲಿ, ೮೦ ರೂಪಾಯಿಯ ಒಂದು ಟ್ರೇ ಯನ್ನು ೧೧೦ರಿಂದ ೧೩೦ ರೂಪಾಯಿಗೆ ರೈತರಿಗೆ ಮಾರಾಟ ಮಾಡುತ್ತಿರುವ ಕುರಿತು ದೂರು ನೀಡಿದ್ದರು.
ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ ಹಾಗೂ ಅಭಿವೃದ್ದಿ) ಶಾಸನ ೧೯೯೬ರ ಪ್ರಕಾರ ಅನಧಿಕೃತ ವಸೂಲಿಗಳ ನಿಷೇಧ ಕಲಂ ೭೯ರಲ್ಲಿ ದಲ್ಲಾಲಿಗಳು ರೈತರಿಂದ ಯಾವುದೇ ಹಣ ಕಡಿತಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಿದೆ.
ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಜನಜಾಗೃತಿ ಸಂಘವೇ ಮಾಡಿ ದಾಖಲೆ ಸಮೇತ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.