ಬೆಂಗಳೂರು prajakiran.com : ಜೂನ್ 7ರಂದು ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರಕಾರ ಪರವಾನಿಗೆ ನೀಡದ ಹಿನ್ನಲೆಯಲ್ಲಿ ದಿನಾಂಕ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜೂನ್ 7ರ ಅಧಿಕಾರ ಸ್ವೀಕಾರ ಮೊಟಕು ಮಾಡಲಾಗಿದ್ದು, ಅವರು ಪರವಾನಿಗೆ ನೀಡಿದನಂತರವೇ ಅಧಿಕಾರ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಉದ್ದೇಶ ಪೂರ್ವಕವಾಗಿ ಅವರು ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದಾರೆಯೇ ಎಂಬಅನುಮಾನ ಕಾಡುತ್ತಿದ್ದು, ನಾವು ಕೇವಲ ಸಾಂಕೇತಿಕವಾಗಿ ಧ್ವಜ ಹಸ್ತಾಂತರ ಕಾರ್ಯಕ್ರಮ, ಜ್ಯೋತಿ ಬೆಳಗಿಸುವುದು, ಹಾಗೂ 150 ಜನ ಸೇರಿ ಪ್ರತಿಜ್ಞಾ ಕಾರ್ಯಕ್ರಮ ಆಯೋಜಸಿದ್ದೇವು.
ಅದನ್ನು ರಾಜ್ಯದ 7800 ಕಡೆ ಕಾರ್ಯಕ್ರಮ ಆಯೋಜನೆ ಮಾಡಲು ಸಿದ್ದತೆ ಕೂಡ ಮಾಡಿಕೊಂಡಿದ್ದೇವು. ಆದರೆ 150 ಜನರಿಗೆ ಕಾರ್ಯಕ್ರಮಕ್ಕೆ ಅನುಮತಿ ನೀಡಲ್ಲ ಅಂದರೆ ಏನರ್ಥ ಎಂದು ಪ್ರಶ್ನಿಸಿ ತಮ್ಮಅಸಮಾಧಾನ ವ್ಯಕ್ತಪಡಿಸಿದರು.
ಇದರ ಹಿಂದೆ ರಾಜಕೀಯ ಹುನ್ನಾರವಿದೆ. ಕೇಂದ್ರ ಸರಕಾರ ರಾಜ್ಯ ಸರಕಾರದ ಮಾರ್ಗಸೂಚಿ ನೆಪ ಹೇಳುತ್ತಿದೆ. ಅದರ ವಿರುದ್ದ ನಮಗೆ ಬೇಸರವಿದೆ. ಆದರೆ ಕಾನೂನು ಪಾಲಿಸುತ್ತೇವೆ. ಗೌರವಿಸುತ್ತೇವೆ. ಅದರ ವಿರುದ್ದ ಹೋಗಲ್ಲ ಎಂದರು.
ಜೂನ್ 7ರಂದು ಕಾರ್ಯಕ್ರಮ ಮಾಡಕ್ಕೆ ಆಗಲ್ಲ. ಅಂದಿನ ಕಾರ್ಯಕ್ರಮ ಮೊಟಕು ಮಾಡಿಕೊಂಡು, ಸಿದ್ದತೆ ಮುಂದುವರೆಸಿ, ಸರಕಾರಅನುಮತಿ ಕೊಟ್ಟ ಮೇಲೆ ಮಾಡ್ತಿವಿ ದಿನಾಂಕವಷ್ಟೇ ಬದಲಾವಣೆ ಆಗಬಹುದು ಎಂದರು.
ಇಲ್ಲದಿದ್ದರೆ ಅಧಿಕಾರಿಗಳು ತೊಂದರೆ ಮಾಡ್ತಾರೆ. ಜೂನ್ 8ರಂದು ಪರಿಸ್ಥಿತಿ ನೋಡಿಕೊಂಡು ತಿಳಿಸುತ್ತೇವೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡಿ ದಿನಾಂಕ ನಿಗದಿ ಮಾಡ್ತಿನಿ. ಕಾರ್ಯಕರ್ತರು ಪಕ್ಷ ಸಂಘಟನೆ ಮುಂದುವರೆಸಿ ಸರಕಾರ ಪರವಾನಿಗೆ ಕೊಟ್ಟ ಮೇಲೆಯೇ ಕಾರ್ಯಕ್ರಮ ಮಾಡೋಣ. ದಿನಾಂಕ ನಂತರ ತಿಳಿಸುತ್ತೇನೆ ಎಂದು ಡಿಕೆಶಿ ಹೇಳಿದರು.