ಧಾರವಾಡ prajakiran.com : ಧಾರವಾಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ಯಡವಟ್ಟು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಹುದ್ದೆಗೆ ವರ್ಗಾವಣೆಯಾಗಿ ಬಂದಿರುವ ರವೀಂದ್ರ ಸಂಕಣ್ಣವರ ಅವರಿಗೆ ನಾಲ್ಕು ದಿನ ಕಳೆದರೂ ಹಿರಿಯ ಅಧಿಕಾರಿಗಳು ಅಧಿಕಾರ ಸ್ವೀಕಾರಕ್ಕೆ ಅವಕಾಶ ನೀಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಶುಕ್ರವಾರವಷ್ಟೇ ರವೀಂದ್ರ ಬಡ್ತಿ ಮೇಲೆ ಧಾರವಾಡಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ. ಅಲ್ಲದೆ, ಅವರು ಖಾಲಿಯಿರುವ ಹುದ್ದೆಗೆ ಈ ಆದೇಶ ಪಡೆದು ಬಂದಿದ್ದಾರೆ.
ಆದರೆ ಸಮಾಜಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಮ್ಯಾನೇಜರ್ ಅಧಿಕಾರ ಸ್ವೀಕರಿಸಿರುವುದಕ್ಕೆ ಗ್ನಿನ್ ಸಿಗ್ನಲ್ ನೀಡಲು ಶಾಸಕರ ಪರವಾನಿಗೆಗೆ ಎದುರು ನೋಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಅವರು ಆ ಸ್ಥಾನಕ್ಕೆ ಅಧಿಕಾರ ಸ್ವೀಕರಿಸಲು ಅವಕಾಶ ನೀಡದಂತೆ ಸೂಚಿಸಿದ್ದಾರೆ ಎಂದು ಅವರನ್ನು ಎಡತಾಕಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ರವೀಂದ್ರ ಖಾಲಿಯಿರುವ ಹುದ್ದೆಗೆ ಸ್ವಯಂ ಪ್ರೇರಿತವಾಗಿ ಅಧಿಕಾರ ಸ್ವೀಕರಿಸಿ, ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಅದಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ಕೇವಲ ಅಂತಿಮ ಮುದ್ರೆ ಒತ್ತುವುದು ಮಾತ್ರ ಬಾಕಿಯಿದೆ.
ಆದರೆ ವಾಸ್ತವವಾಗಿ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಅಧಿಕಾರ ಸ್ವೀಕಾರಕ್ಕೆ ಅವಕಾಶ ನೀಡುವುದು ಬಿಟ್ಟು ಶಾಸಕರ ಪರವಾನಿಗೆಗೆ ಎದುರು ನೋಡುತ್ತಿರುವುದು ವಿಪರ್ಯಾಸವೇ ಸರಿ ಎಂದು ಸಿಬ್ಬಂದಿ ಗೊಣಗುವಂತಾಗಿದೆ.
ಸರಕಾರದ ನಿಯಮಾವಳಿ ಪ್ರಕಾರ ಇದು ಅಗತ್ಯವಿಲ್ಲ. ಕೇವಲ ಕಚೇರಿಯ ಹಿರಿಯ ಅಧಿಕಾರಿಗಳು ಸಮ್ಮತಿ ನೀಡಿದರೆ ಸಾಕು. ಆದರೆ ಈ ಪ್ರಕರಣ ಶಾಸಕರ ಅಂಗಳಕ್ಕೆ ಹೋಗಿ ನಿಂತಿರುವುದು ಅಧಿಕಾರಿಗಳಿಗೆ ಕೂಡ ಇರಿಸುಮುರಿಸು ತಂದಿದೆ ಎಂದರೆ ತಪ್ಪಾಗಲಾರದು.
ಈ ಬಗ್ಗೆ ಧಾರವಾಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುರುಷೋತ್ತಮ ಅವರನ್ನು ಪ್ರಜಾಕಿರಣ.ಕಾಮ್ ಪ್ರಶ್ನಿಸಿದಾಗ ತಕ್ಷಣ ಇದನ್ನು ಸರಿಪಡಿಸಿಕೊಳ್ಳಲಾಗುವುದು ಎಂದು ಸಮಜಾಯಿಸಿ ನೀಡಿದ್ದಾರೆ.