ಸೆ. 25ರಂದು ಕೇವಲ ಪ್ರತಿಭಟನೆ, ರಸ್ತೆ ತಡೆ, ಜೈಲ್ ಭರೋ ಚಳುವಳಿ
ಬೆಂಗಳೂರು prajakiran.com : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಕೇಂದ್ರ ಹಾಗೂ ರಾಜ್ಯದ ಜನ ವಿರೋಧಿ ನೀತಿ ಖಂಡಿಸಿ ಕರೆ ನೀಡಲಾಗಿದ್ದ ಸೆ. 25ರ ಬಂದ್ ಬದಲಿಗೆ 28ರಂದು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ರಾಜ್ಯದಲ್ಲಿ ದಲಿತ, ರೈತ, ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ 32 ಸಂಘಟನೆಗಳು ಸೇರಿ ಐಕ್ಯ ಹೋರಾಟ ನಡೆಸುತ್ತಿವೆ. ರಾಜ್ಯ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಾಪಾಸ್ ಪಡೆಯುವಂತೆ ಆಗ್ರಹಿಸಿ ಸೆ. 28ರಂದು ಸೋಮವಾರ ರಾಜ್ಯ ಬಂದ್ ಕರೆ ನೀಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ವಿರುದ್ದ ಸೆ. 28ರಂದು ಬಂದ್ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿವರಿಸಿದರು.
ಸೆ. 25ರಂದು ಕೇವಲ ರಸ್ತೆ ತಡೆ, ಪ್ರತಿಭಟನೆ, ಜೈಲ್ ಭರೋ ಚಳುವಳಿ ನಡೆಸಲಾಗುವುದು. ಈ ಹೋರಾಟ ರಾಜ್ಯವ್ಯಾಪ್ತಿ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಕುರುಬೂರ ಶಾಂತಕುಮಾರ್ ತಿಳಿಸಿದ್ದಾರೆ.
ಸೆ. 28ರ ಬಂದ್ ಕುರಿತು ವಿಧಾನ ಸಭೆಯ ನಿರ್ಧಾರ ಆಧರಿಸಿ ಮುಂದಿನ ಹೆಜ್ಜೆ ಕುರಿತು ಪ್ರಕಟಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಸೆ. 28ರ ಕರ್ನಾಟಕ ಬಂದ್ ಬಗ್ಗೆ ಹಲವು ಸಂಘಟನೆಗಳಿಂದ ಗೊಂದಲಗಳಿದ್ದು, ಅಖಿಲ ಭಾರತ ಕಿಶಾನ್ ಸಂಘರ್ಷ ಸಮಿತಿ, ಕಿಶಾನ್ ಮಹಾ ಸಂಘಟನೆ, ದಲಿತ ಸಂಘಟನೆಗಳ ಒಕ್ಕೂಟ, ಕಾರ್ಮಿಕ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಮುಖಂಡರ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಕುರುಬೂರ ಶಾಂತಕುಮಾರ್ ಸ್ಪಷ್ಟಪಡಿಸಿದ್ದಾರೆ.
32 ಸಂಘಟನೆಗಳ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು. ವಿಧಾನಸಭೆ ಅಧಿವೇಶನ ಶನಿವಾರ ಮುಗಿಯುವ ಸಾಧ್ಯತೆಗಳಿವೆ. ಹೀಗಾಗಿ ಸೆ. 25ರಂದು ರಾಜ್ಯವ್ಯಾಪ್ತಿ ಹೋರಾಟ ಉಗ್ರ ಸ್ವರೂಪದಾಗಿದ್ದೆ ಎಂದರು.