ಬೆಂಗಳೂರು prajakiran.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಮುಕ್ತಿ ಹಾಕಲು ಅನೇಕ ಕಾರ್ಯಕ್ರಮ ನೀಡಿದ್ದಾರೆ.
ಜಾಗತೀಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇಶದ ಏಕತೆಗಾಗಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ 370 ರದ್ದು, ಒಂದು ದೇಶ ಒಂದು ರೇಶನ್ ಕಾರ್ಡ್, ರಾಮಮಂದಿರ ತೀರ್ಪು, ತ್ರಿವಳಿ ತಲಾಖ್ ರದ್ದು ಸೇರಿ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಎರಡನೇ ಅವಧಿಯ ಮೊದಲ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದಕ್ಕೆ ಅಭಿನಂದಿಸಿದರು.
ಶ್ರಮಿಕ, ರೈತರು, ಸಣ್ಣ,ಅತಿ ಸಣ್ಣರೈತರು, ಕೈಗಾರಿಕೆಗಳು, ಮಧ್ಯಮ ವರ್ಗ ಹಾಗೂ ಬಡವರಿಗಾಗಿ ಹತ್ತು ಹಲವು ವಿಶಿಷ್ಟ ಯೋಜನೆಗಳಾದ ಜನಧನ ಯೋಜನೆ, ಜನರಿಕ್ ಔಷಧ, ಮುದ್ರಾ, ಆಯುಷ್ ಮಾನ್ ಭಾರತ ಸೇರಿದಂತೆ ಹಲವಾರು ಯೋಜನೆ ರೂಪಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.
ಇದಲ್ಲದೆ, ದೇಶದ ಜ್ವಲಂತ ಸಮಸ್ಯೆ ಗಳಿಗೆ ಸ್ಪಂದಿಸಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದ ಯೋಜನೆಗಳಿಗೆ ಚಾಲನೆಕೊಟ್ಟು ಪ್ರವಾಹ ಪರಿಸ್ಥಿತಿ, ಅತಿವೃಷ್ಟಿ, ಅನಾವೃಷ್ಟಿ ಕರೋನಾ ನಿಯಂತ್ರಣಕ್ಕೆ ನೆರವುಕೊಟ್ಟಿದ್ದಾರೆ.
ರಾಜ್ಯಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಅಲ್ಲದೆ, ವಿಮಾನ, ರೈಲು, ರಸ್ತೆ ಕಾಮಗಾರಿ ಸೇರಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ, ಕೆ.ಎಚ್. ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಘಟನಾನುಘಟಿಗಳು ಅವರ ಜನಪ್ರಿಯತೆ ಅಲೆಯ ಎದುರು ಸೋತಿದ್ದಾರೆ. ಆ ಮೂಲಕ ರಾಜ್ಯದ 28 ಲೋಕ ಸಭಾ ಕ್ಷೇತ್ರದಲ್ಲಿ 25 ಸ್ಥಾನ ಗೆದ್ದಿದ್ದಾರೆ ಎಂದರು.
ಎರಡನೇ ಅವಧಿಯ ಪ್ರಥಮದಲ್ಲಿ ದೇಶದ ಸುರಕ್ಷತೆ ಒತ್ತು ನೀಡಿದ್ದಾರೆ. ಪ್ರಪಂಚದ ಅಗ್ರಗಣ್ಯ ನಾಯಕರಾಗಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾಯ್ದೆ ಜಾರಿ ಮಾಡಿದ್ದಾರೆ.
ಸ್ಟಾಟ್ ಅಪ್ ಯೋಜನೆ ಜಾರಿಗೊಳಿಸಿ 5 ವರ್ಷದ ಆಡಳಿತದಲ್ಲಿ ನುಡಿದಂತೆ ನಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಣಗಾನ ಮಾಡಿದರು.