ಧಾರವಾಡ prajakiran.com : ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿನ ಮೈತ್ರಿ ಪ್ಯಾಲೇಸ್ ಹೊಟೆಲ್ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಧಾರವಾಡ ತಾಲೂಕಿನ ನಿಗದಿ ಗ್ರಾಮದ ಗಂಗಪ್ಪ ಅಡಿವೆಪ್ಪ ಪಾಟೀಲ (೪೫) ಎಂಬುವನೇ ಮೃತಪಟ್ಟ ವ್ಯಕ್ತಿ.
ಬೈಕ್ ಹಿಂದೆ ಕುಳಿತಿದ್ದ ಹುಬ್ಬಳ್ಳಿಯ ನೀಲಕಂಠ ಗುರಲಿಂಗಪ್ಪ ಜಾಲವಾಡಗಿ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಂಗಪ್ಪ ಪಾಟೀಲನು ತನ್ನ ಬೈಕ್ ಮೇಲೆ ನೀಲಕಂಠ ಜಾಲವಾಡಗಿಯನ್ನು ಹುಬ್ಬಳ್ಳಿಗೆ ಬಿಟ್ಟು ಬರಲು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರಣ ಗಂಗಪ್ಪ ತೀವ್ರವಾಗಿ ಗಾಯಗೊಂಡಿದ್ದನು.
ಆತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.