ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಕರೋನಾ ಎರಡು ಸಾವಿರದ ಗಡಿ ದಾಟಿದ್ದು, ಜಿಲ್ಲೆಯ ಜನತೆ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಪ್ರತಿನಿತ್ಯ ನೂರರ ಗಡಿ ದಾಟುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳು ಈವರೆಗೆ ಒಟ್ಟು 2041 ಕ್ಕೆ ಬಂದು ನಿಂತಿದೆ.
ಇದರಲ್ಲಿ ಈವರೆಗೆ 696 ಜನ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1283 ಪ್ರಕರಣಗಳು ಸಕ್ರಿಯವಾಗಿದ್ದರೆ, ಈವರೆಗೆ ಚಿಕಿತ್ಸೆ ಫಲಿಸದೆ 62 ಜನ ಮೃತಪಟ್ಟಿದ್ದಾರೆ.
ಭಾನುವಾರದ ಹೆಲ್ತ್ ಬುಲೇಟಿನ್ ಪ್ರಕಾರ ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ನಾಲ್ವರು ಕಳೆದ ಮೂರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮೃತಪಟ್ಟವರ ವಿವರಗಳು ಇಂತಿವೆ :
ಪಿ-57451 ( 52, ಪುರುಷ) ಹುಬ್ಬಳ್ಳಿ ಬೊಮ್ಮಾಪುರ ಓಣಿಯ ಕುಂಬಾರ ಓಣಿ ನಿವಾಸಿ.
ಪಿ-57869 ( 50, ಮಹಿಳೆ) ಹುಬ್ಬಳ್ಳಿ ತೊರವಿಹಕ್ಕಲ ನಿವಾಸಿ.
ಪಿ-65306 ( 46, ಪುರುಷ) ಧಾರವಾಡ ಲೈನ್ ಬಜಾರ್ ದುರ್ಗಾದೇವಿ ಗುಡಿ ಹತ್ತಿರದ ನಿವಾಸಿ.
ಪಿ- 44767 ( 57 , ಪುರುಷ ) ಧಾರವಾಡ ಚರಂತಿಮಠ ಗಾರ್ಡನ್ ನಿವಾಸಿ. ಇವರು ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಹಾಯಕ ಸಬ್ ಇನ್ಸಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರು ನಾಲ್ಕು ದಿನಗಳ ಹಿಂದೆ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೈ ಶುಗರ್ ನಿಂದ ಬಳಲುತ್ತಿದ್ದಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕರೋನಾಕ್ಕೆ ಇಬ್ಬರು ಎ ಎಸ್ ಐಗಳು ಬಲಿಯಾದಂತಾಗಿದ್ದು, ಇದು ಜಿಲ್ಲೆಯ ಕರೋನಾ ಸೇನಾನಿಗಳ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ನಿಯಮಾನುಸಾರ ನಾಲ್ವರ ಪಾರ್ಥಿವ ಶರೀರಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಧಾರವಾಡ ಜಿಲ್ಲಾಡಳಿತ ತಿಳಿಸಿದೆ.