ಧಾರವಾಡ prajakiran.com : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಕೋವಿಡ್ ತಪಾಸಣೆ ಪ್ರಯೋಗಾಲಯ ವರದಿ ನೀಡುವ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಗತ್ಯ ಬಿದ್ದರೆ ತಾಲೂಕು ಕೇಂದ್ರಗಳಲ್ಲಿಯೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ, ಲಕ್ಷಣ ರಹಿತ ರೋಗಿಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದರು.
ಆಯಾ ತಹಸೀಲ್ದಾರರಯ ಸ್ಥಳೀಯವಾಗಿ ಆಸ್ಪತ್ರೆ, ವಸತಿ ಶಾಲೆಗಳಲ್ಲಿ, ಹಾಸಿಗೆಗಳು, ಆಹಾರ ಪೂರೈಕೆ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕೋವಿಡ್ ಸೋಂಕು ದೃಢಪಟ್ಟು, ಸೋಂಕಿನ ಲಕ್ಷಣಗಳು ಇಲ್ಲದಿರುವ ವ್ಯಕ್ತಿಗಳಿಗೆ ಹೋಂ ಐಸೋಲೇಶನ್ ಹಾಗೂ ಕೋವಿಡ್ ಕೇರ್ ಸೆಂಟರಗಳಲ್ಲಿ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಇಂತಹ ಸೋಂಕಿತರ ಆರೋಗ್ಯದ ಬಗ್ಗೆ ವೈದ್ಯಕೀಯ ತಂಡ ನಿರಂತರವಾಗಿ ಸಂಪರ್ಕಿಸಿ ಮಾಹಿತಿ ನೀಡುವ, ಆರೋಗ್ಯ ಸ್ಥಿತಿಗತಿ ಪರಿಶೀಲಿಸಿ ಸಲಹೆ ನೀಡುವ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದರು.
ಹೋಂ ಐಸೋಲೇಷನ್ ಹಾಗೂ ಕೋವಿಡ್ ಕೇರ್ ಸೆಂಟರುಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರು ಪಾಲಿಸಬೇಕಾದ ಕ್ರಮಗಳ ಬಗ್ಗೆ ವಿಡಿಯೋ ಸಂದೇಶ ಸಿದ್ಧಪಡಿಸಿ ,ತಿಳುವಳಿಕೆ ಮೂಡಿಸಬೇಕು.
ರೋಗಿಗಳ ಸ್ಥಳಾಂತರಕ್ಕೆ ನಿಗದಿ ಪಡಿಸಿರುವ ಆಂಬುಲೆನ್ಸ್ ಗಳ ಮೂಲಕ ರೋಗಿಗಳ ವಾಸಸ್ಥಳಗಳಿಂದ ಆಸ್ಪತ್ರೆಗೆ ಕರೆತರುವ ಮತ್ತು ಗುಣಮುಖರಾಗಿ ಬಿಡುಗಡೆಯಾಗುವ ವ್ಯಕ್ತಿಗಳ ಮನೆ ತಲುಪಿಸುವ ಕಾರ್ಯ ಯೋಜಿತ ರೀತಿಯಲ್ಲಿ ನಿರ್ವಹಿಸಲು ರಚಿಸಿರುವ ತಂಡ ಸದಾ ಕಾಲ ಸನ್ನದ್ಧವಾಗಿರಬೇಕು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ತಾಲೂಕು ಮಟ್ಟದಿಂದ ಕೋವಿಡ್ ಕೇರ್ ಸೆಂಟರುಗಳ ಪ್ರಾರಂಭಿಸುವ ಕಾರ್ಯದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು ಕೂಡ ಭಾಗಿಯಾಗಲಿದ್ದಾರೆ.
ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ ವಸತಿಶಾಲೆ, ವೈದ್ಯಕೀಯ, ಅರೆವೈದ್ಯಕೀಯ ಮಾನವ ಸಂಪನ್ಮೂಲದ ಸಮರ್ಥ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ,ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಮಹಾನಗರಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಡಾ.ಲಕ್ಷೀಕಾಂತ ಲೋಕರೆ, ಡಾ.ಸುಜಾತಾ ಹಸವಿಮಠ, ಡಾ.ಶಶಿ ಪಾಟೀಲ, ಡಾ.ಶಶಿಕಲಾ ನಿಂಬಣ್ಣವರ, ಡಾ.ತನುಜಾ ಇದ್ದರು.