ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಬರೋಬ್ಬರಿ ಎಳು ಜನ ಸಾವಿನ ಕದ ಬಡಿದಿದ್ದಾರೆ.
ಮತ್ತೆ ಹೊಸದಾಗಿ 271 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ.
271 ಸೋಂಕಿತರಲ್ಲಿ, 92ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದಾರೆ. 14 ಜನಅಂತರ್ ರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.
ಇಂದು ರಾಜ್ಯದಲ್ಲಿ 464 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 3440ಜನ ಗುಣಮುಖರಾಗಿದ್ದು, 2995 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶುಕ್ರವಾರವೂ ಎಳು ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 79ಕ್ಕೆ ಬಂದು ನಿಂತಿದೆ.
ಗುರುವಾರ ಪತ್ತೆಯಾದ 271 ಪ್ರಕರಣಗಳಲ್ಲಿ ಬಳ್ಳಾರಿಯಲ್ಲಿ ಒಂದೇ ದಿನ 97 ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ 36, ಉಡುಪಿಯಲ್ಲಿ 22, ಕಲಬುರಗಿಯಲ್ಲಿ 20, ಧಾರವಾಡದಲ್ಲಿ 19, ದಕ್ಷಿಣ ಕನ್ನಡದಲ್ಲಿ 17 ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಇನ್ನೂಳಿದಂತೆ ಬೀದರ ಜಿಲ್ಲೆಯಲ್ಲಿ 10, ಹಾಸನ 9, ಮೈಸೂರು 9, ತುಮಕೂರ 7, ಶಿವಮೊಗ್ಗ 6, ರಾಯಚೂರು 4, ಉತ್ತರಕನ್ನಡ 4, ಚಿತ್ರದುರ್ಗ 3, ರಾಮನಗರ 3, ಮಂಡ್ಯ 2, ಬೆಳಗಾವಿ, ವಿಜಯಪುರ ಹಾಗೂ ಕೋಲಾರದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಶುಕ್ರವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ನಾಲ್ವರು ಸಾವನ್ನಪ್ಪಿದ್ದಾರೆ.
ಪಿ-5321 ನೇ ಸೋಂಕಿತ 61 ವರ್ಷದ ಮಹಿಳೆ ಉಸಿರಾಟ ತೊಂದರೆಯಿಂದ ಬೆಂಗಳೂರು ನಗರದ ನಿಗದಿತ ಆಸ್ಪತ್ರೆಗೆ ಜೂನ್ 6ರಂದು ದಾಖಲಾಗಿದ್ದರು.
ಚಿಕಿತ್ಸೆಗೆ ಸ್ಪಂದಿಸದೆ 12ರಂದು ಸಾವನ್ನಪ್ಪಿದ್ದಾರೆ. ಅದೇ ರೀತಿ ಪಿ 6370ನೇ ಸೋಂಕಿತ 65 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಅವರು ಜೂನ್ 10ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜೂನ್ 11ರಂದು ಸಾವನ್ನಪ್ಪಿದ್ದಾರೆ. ಪಿ-6376 ನೇ ಸೋಂಕಿತ 52 ವರ್ಷದ ಪುರುಷ ಉಸಿರಾಟದ ತೊಂದರೆಯಿಂದ ಜೂನ್ 10ರಂದು ದಾಖಲಾಗಿದ್ದರು.
ಜೂನ್ 11ರಂದು ನಿಧನ ಹೊಂದಿದರು. ಪಿ-6394 ನೇ ಸೋಂಕಿತ 49 ವರ್ಷದ ಮಹಿಳೆ ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜೂನ್ 10ರಂದು ದಾಖಲಾಗಿದ್ದರು. ಜೂನ್ 11ರಂದು ಸಾವನ್ನಪ್ಪಿದ್ದಾರೆ.
ಕಲಬುರಗಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಪಿ-6323 ನೇ ಸೋಂಕಿತ 53 ವರ್ಷದ ಪುರುಷ ಉಸಿರಾಟದ ತೊಂದರೆಯಿಂದ ಜೂನ್ 9ರಂದು ದಾಖಲಾಗಿದ್ದರು.
ಜೂನ್ 10ರಂದು ಸಾವನ್ನಪ್ಪಿದ್ದಾರೆ. ಪಿ-6325 ನೇ ಸೋಂಕಿತ 48 ವರ್ಷದ ಪುರುಷ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕರೋನಾಗೆ ಮೊದಲ ಬಲಿಯಾಗಿದ್ದು, ಪಿ6307 ನೇ ಸೋಂಕಿತ 60 ವರ್ಷದ ಪುರುಷ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.