ಧಾರವಾಡ prajakiran. com : ಇತ್ತೀಚಿನ ದಿನಗಳಲ್ಲಿ ಯುವಕರು ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗುತ್ತಿದ್ದಾರೆ. ಅದರ ಬದಲಿಗೆ ಸಮಾಜದ ಅಶಕ್ತ ಜನರಿಗೆ ರಕ್ತ ನೀಡುವ ಮೂಲಕ ವೈಶಿಷ್ಟ್ಯ ಹಾಗೂ ಅರ್ಥ ಪೂರ್ಣ ಆಚರಣೆ ಮಾಎಉವ ಸಂಪ್ರದಾಯ ಬೆಳೆಸುವ ಪ್ರಯತ್ನ ಮಾಡೋಣ ಎಂದು ಜನಜಾಗೃತಿ ಸಂಘ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.
ಅವರು ಧಾರವಾಡದ ರೆಡ್ ಕ್ರಾಸ್ ಸಂಸ್ಥೆಯ ಸಭಾ ಭವನದಲ್ಲಿ ಜನಜಾಗೃತಿ ಸಂಘ, ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ , ಧಾರವಾಡ ಜಿಲ್ಲಾಸ್ಪತ್ರೆ ಮತ್ತು ರವಿಶಂಕರ್ ಮಾಲಿ ಪಾಟೀಲ ಗೆಳೆಯರ ಬಳಗದ ಸಹಯೋಗದೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ನಂತರದ ದಿನಗಳಲ್ಲಿ ರಕ್ತ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಅವಶ್ಯಕತೆ ಇರುವವರಿಗೆ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೊಸ ಮುನ್ನುಡಿ ಬರೆಯೋಣ ಎಂದು ಹೇಳಿದರು.
ಡಾ. ಮಹಾಂತೇಶ ವೀರಾಪುರ ಮಾತನಾಡಿ, ರಕ್ತದಾನ ಮಾಡುವುದರಿಂದ ಹೃದಯಾಘಾತ, ಕೊಬ್ಬು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ರಕ್ತದಾನ ಶಿಬಿರಗಳ ಸಂಖ್ಯೆ ಗಣನೀಯವಾಗಿ ಏರಿಸಲು ಸಮಾಜದ ವಿವಿಧ ಸಂಘ ಸಂಸ್ಥೆಗಳು ಕೈ ಜೋಡಿಸಬೇಕು. ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬರಬೇಕು. ಯಾವುದೇ ರೀತಿಯ ಅನುಮಾನವಿದ್ದರೆ ವೈದ್ಯರ ಬಳಿ ಮುಕ್ತವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.
ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ರಕ್ತದಾನ ಮಾಡುವ ಮೂಲಕ ಶಿಬಿರದ ಮೆರಗು ಹೆಚ್ಚಿಸಿದರು.
ಈ ಶಿಬಿರದಲ್ಲಿ ಒಟ್ಟು 21 ಯುವಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಬಿ.ಆರ್. ಸಾರಥಿ, ಡಾ. ಎಸ್. ಜಿ. ಹಿರೇಮಠ, ಡಾ. ಜ್ಯೋತಿ ಉಡುಪ, ಡಾ ಶಶಾಂಕ ಜೋಶಿ, ಸದಾನಂದ ಸಾಧನಿ,ಹರೀಶ ನಾಯ್ಕರ್, ಜನಜಾಗೃತಿ ಸಂಘ ಹಾಗೂ ರವಿಶಂಕರ್ ಮಾಲಿ ಪಾಟೀಲ ಗೆಳೆಯರ ಬಳಗದ ಸದಸ್ಯರು,
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.