ಧಾರವಾಡ prajakiran.com : ಭ್ರಷ್ಟ, ದುರಾಡಳಿತ ನಡೆಸುತ್ತಿರುವ ರಾಜ್ಯದ ಬಿಜೆಪಿಗೆ ಬಸವರಾಜ ಹೊರಟ್ಟಿ ಸೇರುವ ನಿರೀಕ್ಷೆ ನನಗೆ ಇರಲಿಲ್ಲ.
ಇದು ಒಂದು ರೀತಿ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
42 ವರ್ಷಗಳ ಕಾಲ ಅವರನ್ನು ಆರಿಸಿದ ಈ ಕ್ಷೇತ್ರದ ಶಿಕ್ಷಕರೇ ದಾಖಲೆ ಮಾಡಿದಂತಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಕ್ಷಕರಿಗಾಗಿ ಹೋರಾಟ ನಡೆಸುತ್ತಾ ಬಂದಿರುವ ಬಸವರಾಜ ಗುರಿಕಾರ ಅವರನ್ನು ಆರಿಸಿದಲ್ಲಿ, ಬರಲಿರುವ ಕಾಂಗ್ರೆಸ್ ಸರ್ಕಾರ ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲಿದೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಶೇ 40ರಷ್ಟು ಲಂಚ ಇದೆ ಎಂದು ಪ್ರಧಾನಿಗೆ ದೂರು ಬರೆದು ವರ್ಷವಾದರೂ ಕ್ರಮ ಕೈಗೊಂಡಿಲ್ಲ.
ಈ ಪ್ರಕರಣದಲ್ಲೇ ಈಶ್ವರಪ್ಪ ರಾಜೀನಾಮೆ ನೀಡಿರುವುದು. ಸರ್ಕಾರದಲ್ಲಿ ಭ್ರಷ್ಟಾಚಾರ ಇರುವುದು ಸಾಭೀತಾದಂತಾಗಿದೆ. ಹಾಗಿದ್ದರೆ ಪ್ರಧಾನಿ ಹೇಳುತ್ತಿದ್ದ ‘ನ ಕಾವೂಂಗ, ನಾ ಕಾನೇ ದೂಂಗಾ’ ಎಂದಿದ್ದು ಇದೇನಾ?’ ಎಂದು ಕುಟುಕಿದರು.
2013ರಿಂದ 2018ರವರೆಗೆ ಪ್ರತಿ ವರ್ಷದ ಮೂರು ಲಕ್ಷದಂತೆ ಒಟ್ಟು 15 ಲಕ್ಷ ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ಹಂಚಲಾಗಿತ್ತು.
ಆದರೆ 2018ರಿಂದ ಈವರೆಗೆ ಸರ್ಕಾರ ಒಂದೂ ಮನೆ ನೀಡಿಲ್ಲ. ಒಂದು ವೇಳೆ ಮನೆ ಹಂಚಿಕೆ ಆದೇಶವನ್ನು ಜಿಲ್ಲೆಯ ಸಚಿವರು ತೋರಿಸಿದರೆ ನನ್ನ ಮಾತು ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.
2018ರ ಮಾರ್ಚ್ವರೆಗೆ ರಾಜ್ಯ ಸರ್ಕಾರದ ಮೇಲೆ 2.42ಲಕ್ಷ ರೂ. ಕೋಟಿ ಸಾಲ ಇತ್ತು. ಆದರೆ 2022ಕ್ಕೆ ಇದು ಏಕಾಏಕಿ 5.40ಲಕ್ಷ ಕೋಟಿಗೆ ಏರಿದೆ.
ನಾನೇ ಮುಂದೆ ಮುಖ್ಯಮಂತ್ರಿಯಾಗಿ ಬಂದರೂ ಇದನ್ನು ಸರಿಪಡಿಸಲು ಕನಿಷ್ಠ ಎರಡು ವರ್ಷಗಳು ಬೇಕು. ಇಂಥ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನರು ಮತ ಹಾಕಬಾರದು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿದರು.
ಶಾಸಕರಾದ ಶ್ರೀನಿವಾಸ ಮಾನೆ ಹಾಗೂ ಕುಸುಮಾವತಿ ಶಿವಳ್ಳಿ, ಮುಖಂಡರಾದ ವೀರಣ್ಣ ಮತ್ತಿಕಟ್ಟಿ, ದೀಪಕ ಚಿಂಚೋರೆ, ಇಸ್ಮಾಯಿಲ್ ತಮಟಗಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.