ಧಾರವಾಡ prajakiran.com : ಧಾರವಾಡದ ನುಗ್ಗಿಕೇರಿ ಗಲಾಟೆ ವಿಚಾರವಾಗಿ ಮಾಜಿ ಸಚಿವ ಎ ಎಂ ಹಿಂಡಸಗೇರಿ, ಹಿರಿಯ ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ, ಇಸ್ಮಾಯಿಲ್ ತಮಟಗಾರ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವು ಮುಸ್ಲಿಂ ಮುಖಂಡರ ನಿಯೋಗ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಬುರಾಮ್, ಎಸ್ಪಿ ಕೃಷ್ಣಕಾಂತ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅಲ್ಲದೆ, ಗಲಾಟೆ ಮಾಡಿದವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ ಪೂರ್ವ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ, ಈ ಘಟನೆಯಲ್ಲಿ ಪ್ರಮೋದ ಮುತಾಲಿಕ ನೇರ ಕೈವಾಡವಿದೆ ಎಂದು ಆರೋಪಿಸಿದರು.
ಹುಬ್ಬಳ್ಳಿ-ಧಾರವಾಡ ಶಾಂತಿಗೆ ಹೆಸರುವಾಸಿ. ಇವತ್ತು ಕರಾವಳಿಯ ಕರಿನೆರಳು ಇಲ್ಲಿ ಬೀಳಬಾರದು. ಇಲ್ಲಿ ಎಲ್ಲರೂ ಸೇರಿ ಬಾಳುತ್ತಿದ್ದೇವೆ. ಇದಕ್ಕೆ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಮೋದ ಮುತಾಲಿಕ ಅವರನ್ನು ಧಾರವಾಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಹಾಗಾದಾಗ ಮಾತ್ರ ಧಾರವಾಡ ಶಾಂತಿಯಿಂದ ಇರುತ್ತದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಮುಖಂಡರು
ಧಾರವಾಡ ನುಗ್ಗಿಕೇರಿ ಹನುಮಂತ ದೇವಸ್ಥಾನ ಗಲಾಟೆ ವಿಚಾರವಾಗಿ ಮುಸ್ಲಿಂ ಮುಖಂಡರು ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದರು.
ಮಾಜಿ ಸಚಿವ ಎ ಎಂ ಹಿಂಡಸಗೇರಿ ಹಾಗೂ ಇಸ್ಮಾಯಿಲ್ ತಮಟಗಾರ ನೇತೃತ್ವದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಪರ್ಯಾಯಸ್ಥರ ಜೊತೆಗೆ ಚರ್ಚೆ ನಡೆಸಿದರು.
ಈ ವೇಳೆ ಪರ್ಯಾಯಸ್ಥ ನರಸಿಂಹರಾವ್ ದೇಸಾಯಿ ಜೊತೆ ಮಾತುಕತೆ ನಡೆಸಿ, ಎಲ್ಲರೂ ಸೌಹಾರ್ದವಾಗಿ ಇರೋಣ ಅಂತಾ ಹೇಳಿದರು.
ಈ ಬಗ್ಗೆ ಸಕಾರಾತ್ಮಕ ಉತ್ತರ ಕೊಟ್ಟ ಪರ್ಯಾಯಸ್ಥ ನರಸಿಂಹರಾವ್, ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸೋದಾಗಿ ಹೇಳಿದರು.