ಬೆಂಗಳೂರು prajakiran.com ಏ. 19 :
ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಮಠಮಾನ್ಯಗಳು ಮಹತ್ವದ ಪಾತ್ರ ವಹಿಸುತ್ತವೆ.
ಈ ಎಲ್ಲ ಮಠಗಳು ತಮ್ಮ ಕರ್ತವ್ಯವನ್ನುಜವಾಬ್ದಾರಿಯುತವಾಗಿ ಮಾಡುತ್ತಿರುವುದರಿಂದ ಜನರಲ್ಲಿ ಆತ್ಮಸಾಕ್ಷಿ, ಪಾಪ- ಪುಣ್ಯಗಳ ಪ್ರಜ್ಞೆ ಇನ್ನೂ ಜೀವಂತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹರಿಹರಪುರ ಶ್ರೀಮಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ವತಿಯಿಂದ ಮಹಾಕುಂಭಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗಬೇಕು. ಆದಿಶಂಕರಾಚಾರ್ಯರ ವಿಚಾರಗಳು, ಜೀವನಾದರ್ಶಗಳನ್ನು ಜೀವನದಲ್ಲಿ ಕಿಂಚಿತ್ತಾದರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀಮಠದ ಪರಮಪೂಜ್ಯರ ಸಾಮಾಜಿಕ ಚಟುವಟಿಕೆಗಳು ಅಭಿನಂದನೀಯ. ಸಮಾಜವನ್ನು ಪರಿವರ್ತನೆ ಮಾಡುವ ಕಾರ್ಯ ನಿರಂತರವಾಗಿ ಸಾಗಿದೆ. ಶ್ರೀಮಠದ ಎಲ್ಲ ಸಾಮಾಜಿಕ ಕೆಲಸಗಳಿಗೆ ಸರ್ಕಾರದ ಬೆಂಬಲ ಇರಲಿದೆ ಎಂದು ತಿಳಿಸಿದರು.
ಆದಿಶಂಕರಾಚಾರ್ಯರ ಶಕ್ತಿ ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದುಗೂಡಿಸಿದೆ. ಅಂತೆಯೇ ಶ್ರೀಮಠದ ಪರಮ ಪೂಜ್ಯರು ಭಾವೈಕ್ಯತೆಯ ಸಂದೇಶವನ್ನು ಸಾರಿ ಜನರ ಮನಸ್ಸುಗಳನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಒಂದು ಸಮಾಜ ಆದರ್ಶಮಯವಾಗಲು ದೈವಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಬಹಳ ಮುಖ್ಯ. ಭಕ್ತಿಯೆಂದರೆ ಉತ್ಕøಷ್ಟವಾದ, ಕರಾರುರಹಿತವಾದ ಪ್ರೀತಿ.ನಾನು ಎಂಬ ಅಹಂನ್ನು ಭಕ್ತಿಯಲ್ಲಿ ಸಮರ್ಪಣೆ ಮಾಡಬೇಕು.
ಬದುಕಿನ ಬ್ಯಾಲೆನ್ಸ್ ಶೀಟ್ ಬ್ಯಾಲೆನ್ಸ್ ಆಗಬೇಕು. ಸಮಾಜದಿಂದ ಪಡೆದು ಒಳ್ಳೆಯದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಸಮಾಜಕ್ಕೆ ಒಳಿತು ಮಾಡುವ ಪರಂಪರೆ ಶ್ರೀಮಠದಲ್ಲಿ ಬೆಳೆದು ಬಂದಿದೆ. ಶಾರದಾ ಮಾತೆ ಹಾಗೂ ಲಕ್ಷ್ಮೀನರಸಿಂಹ ದೇವರು ಹಾಗೂ ಪರಮಪೂಜ್ಯರ ಕೃಪಾರ್ಶೀವಾದದಿಂದ ಲಕ್ಷಾಂತರ ಭಕ್ತರಿಗೆ ಒಳಿತುಂಟಾಗಿದೆ ಎಂದರು.