ಧಾರವಾಡ prajakiran.com : ನಿನ್ನೆಯಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ, ತುಪರಿ ಹಳ್ಳ ಸೇರಿದಂತೆ ಬಹುತೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯತ್ತಿವೆ.
ಬೆಣ್ಣಿ ಹಳ್ಳ ಹಾಗೂ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು, ಕಳೆದ ವರ್ಷ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುತ್ತಿವೆ.
ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಕೆಲವೊಂದಿಷ್ಟು ಮನೆಗಳಿಗೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಇನ್ನು ವಿಪರೀತ ಮಳೆಯಿಂದಾಗಿ ಬೆಳೆಗಳು ಮಳೆಯ ಪಾಲಾಗಿವೆ. ಇನ್ನೇನು ಕೆಲವೊಂದಿಷ್ಟು ದಿನ ಕಳೆದಿದ್ದರೆ ಹೆಸರು ಕಟಾವಿಗೆ ಬರುತ್ತಿತ್ತು. ಈ ಮಳೆಯಿಂದಾಗಿ ಹೆಸರು ನೆಲಕಚ್ಚಿದೆ. ಇದರಿಂದ ರೈತ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.
ಚಿಕ್ಕ ಚಿಕ್ಕ ಬ್ರಿಜ್ ಗಳು ನೀರಿನಿಂದ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಬಂದ್ ಆಗಿವೆ. ಕೃಷಿ ಚಟುವಟಿಕೆಗಳಿಗೆ ಮಳೆ ಬ್ರೇಕ್ ಹಾಕಿದ್ದು, ಬಂದ ಬೆಳೆ ಕೈ ಸೇರುವುದೋ ಇಲ್ಲವೋ ಎಂದು ರೈತ ಸಮುದಾಯ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.