*ಧಾರವಾಡ ಗ್ರಾಮೀಣ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಮತ್ತೊಂದು ಸಂಕಷ್ಟ*
*ಸಾಕ್ಷಿನಾಶ ಕುರಿತು ಮರು ತನಿಖೆಗೆ ಬೆಂಗಳೂರಿನ ಎಸಿಎಂಎಂ 48 ನ್ಯಾಯಾಲಯ ಆದೇಶ*
ಬೆಂಗಳೂರು ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಅವರ ಸಹೋದರರಾಗಿರುವ ಗುರುನಾಥ ಗೌಡ ಅವರಿಗೆ ಪ್ರಕರಣದಲ್ಲಿ ಮುಂದುವರೆಯದಂತೆ ರಾಜಿ ಸಂಧಾನಕ್ಜೆ ಒತ್ತಡ ಹಾಗೂ ಬೆದರಿಕೆ ಹಾಕಿದ ಪ್ರಕರಣದಲ್ಲಿ ಹುಬ್ಬಳ್ಳಿ ಧಾರವಾಡ ಅಂದಿನ ಪೊಲೀಸರು ವಿನಯ್ ಕುಲಕರ್ಣಿ ಪರ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಬೆಂಗಳೂರಿನ ಎಸಿಎಂಎಂ 48 ನ್ಯಾಯಾಲಯ ತಿರಸ್ಕರಿಸಿ ಮರುತನಿಖೆ ನಡೆಸುವಂತೆ ಮಹತ್ವದ ಆದೇಶ ಹೊರಡಿಸಿದೆ.
ಅಸಮರ್ಪಕ ತನಿಖೆ ನಡೆಸಿದ ಅವಳಿನಗರ ಪೊಲೀಸರನ್ನು ತೀವ್ರವಾದ ತರಾಟೆಗೆ ತೆಗೆದುಕೊಂಡಿದೆ. ದೂರುದಾರ ಗುರುನಾಥಗೌಡ ಅವರು ಸಾಕ್ಷ್ಯವಾಗಿ ಸಲ್ಲಿಸಿರುವ ದಾಖಲೆಗಳನ್ನು ಪೊಲೀಸರು ಪರಿಗಣಿಸಿಲ್ಲ ಎಂಬುದನ್ನು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಡಿಜಿಟಲ್ ಸಾಕ್ಷ್ಯ ಪರಿಗಣಿಸದೇ ಪೊಲೀಸರು ಕರ್ತವ್ಯ ಲೋಪ ಹಾಗೂ ದಿವ್ಯ ನಿರ್ಲಕ್ಷ್ಯತನ ತೋರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ತನಿಖೆಗೆ ಒಳಪಡಿಸದೇ ಬೇಜವಾಬ್ದಾರಿತನ ತೋರಿಸಿದ್ದಾರೆ.
ಅಲ್ಲದೆ, ತನಿಖೆಗೆ ಸರ್ಕಾರದ ಪೂರ್ವಾನುಮತಿ ಅಗತ್ಯ ಎಂದು ತಪ್ಪು ಮಾಹಿತಿ ನೀಡಲಾಗಿದೆ. ತನಿಖಾಧಿಕಾರಿ ಕಾನೂನು ಅರಿಯಲು ವಿಫಲರಾಗಿದ್ದಾರೆ.
ಹೀಗಾಗಿ ಪ್ರಕರಣದ ಮರುತನಿಖೆ ನಡೆಸುವಂತೆ ನ್ಯಾಯಾಧೀಶೆ ಜೆ. ಪ್ರೀತ್ ಅವರು ಆದೇಶ ಹೊರಡಿಸಿದ್ದಾರೆ.
ಕೊಲೆ ಪ್ರಕರಣದ ಸಾಕ್ಷಿ ನಾಶ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧಿಸಿ ಸುಪ್ರೀಂಕೋರ್ಟ ಷರತ್ತು ಬದ್ದ ಜಾಮೀನು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇತ್ತೀಚೆಗೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು
ಕೂಡ ಸುಪ್ರೀಂ ಕೋರ್ಟ್ ನ ಷರತ್ತು ಸಡಿಲಿಕೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದನ್ನು ಕೂಡ ಇಲ್ಲಿ ನೆನಪಿಸಬಹುದಾಗಿದೆ.
ಇದರಿಂದಾಗಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮತ್ತೊಮ್ಮೆ ತನಿಖೆಯ ಸಂಕಷ್ಟ ಎದುರಾದಂತಾಗಿದೆ