ಬೆಳಗಾವಿ prajakiran.com : ಗಡಿನಾಡು ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಬುಧವಾರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಜನತೆ ಮೊದಲೇ ಕಳೆದ ವರ್ಷದ ಪ್ರವಾಹ ಭೀತಿ ಹಾಗೂ ಕರೋನಾ ಹಾವಳಿಯಿಂದ ಕಂಗೆಟ್ಟ ಬೆನ್ನಲ್ಲೇ ಮತ್ತೇ ಅತಿವೃಷ್ಟಿ ಸಂಭವಿಸುವ ಆತಂಕದಲ್ಲಿದ್ದಾರೆ.
ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಜಾಂಬೋಟಿ ಸಮೀಪದ ಈ ಭಾಗದ ಪ್ರಸಿದ್ದ ದೇವಾಲಯ ಮಲಪ್ರಭಾ ನದಿಯ ಮಧ್ಯ ಭಾಗದಲ್ಲಿ ಇರುವ ಹನುಮಾನ್ ಮಂದಿರ ಸಂಪೂರ್ಣ ಮುಳುಗಡೆಯಾಗಿದೆ.
ಅದರಲ್ಲೂ ಖಾನಾಪುರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅಲ್ಲಲ್ಲಿ ಇರುವ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಇದರಿಂದಾಗಿ ಹಳ್ಳದ ಸುತ್ತಲಿನ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.
ಅದರಲ್ಲೂ ಪ್ರಮುಖವಾಗಿ ಅವರೊಳ್ಳಿ, ಹಿರೇಮುನವಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.
ಇದಲ್ಲದೆ, ಕರ್ನಾಟಕ–ಗೋವಾ ಸಂಪರ್ಕ ಕಲ್ಪಿಸುವ ರೈಲು ಮಾರ್ಗದಲ್ಲಿ ದೊಡ್ಡ ಗುಡ್ಡ ಕುಸಿದ ಪರಿಣಾಮ ನಿಜಾಮುದ್ದೀನ್ ದಿಂದ ವಾಸ್ಕೋಡಗಾಮ ಎಕ್ಸಪ್ರೆಸ್ ರೈಲು ಸ್ಥಗಿತಗೊಂಡಿದೆ.
ಎಂಜಿನ್ ಮೇಲೆ ಗುಡ್ಡ ಕುಸಿದಿದೆ ಎಂದು ತಿಳಿದುಬಂದಿದೆ.ಇದು ಕ್ಯಾಸರ್ಲೊಕ್ ದಿಂದ ಕರಂಜೋಲ್ ರೈಲ್ವೆ ಸ್ಟೇಷನ್ ನಡುವೆ ಸಂಭವಿಸಿದ ಘಟನೆ ಎನ್ನಲಾಗಿದೆ.