ಧಾರವಾಡ Prajakiran.com : ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಂಜೆ ಧಾರವಾಡದ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರೊಂದಿಗೆ ದೂರವಾಣಿ ಮೂಲಕ ಜಿಲ್ಲೆಯ ಮಳೆ ಪರಿಸ್ಥಿತಿಯ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ, ಕೈಗೊಂಡಿರುವ ಕ್ರಮಗಳು, ಎಸ್ ಡಿ ಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮಾರ್ಗದರ್ಶಿ ಸೂತ್ರಗಳನ್ನು ಆಧರಿಸಿರುವ ಮುನ್ನೆಚ್ಚರಿಕೆ ಕ್ರಮಗಳು ಮೊದಲಾದ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಯವರಿಗೆ ವಿವರಿಸಿದರು.
ಮುಖ್ಯಮಂತ್ರಿಯವರು ತಾವು ಆಸ್ಪತ್ರೆಯಲ್ಲಿದ್ದರೂ ಸಹ ಯಾವುದೇ ಸಮಯದಲ್ಲಿ ನೇರವಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ಕುರಿತು ಹೇಳಿದರಲ್ಲದೆ, ಮಳೆ ಪರಿಸ್ಥಿತಿ ನಿರ್ವಹಣೆ , ಕೋವಿಡ್ ನಿಯಂತ್ರಣ ಕುರಿತು ಚರ್ಚಿಸಬಹುದು.
ಸಾರ್ವಜನಿಕರ ಜನಜೀವನಕ್ಕೆ ಆಡಳಿತ ಸದಾ ಸ್ಪಂದಿಸಬೇಕು ಎಂದು ಸಲಹೆ ನೀಡಿದರು ಎಂದು ಧಾರವಾಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ