ಧಾರವಾಡ prajakiran.com : ಹುಬ್ಬಳ್ಳಿ–ಧಾರವಾಡ ಅವಳಿನಗರ ನಡುವಿನ ಬಿಆರ್ಟಿಎಸ್ ಯೋಜನೆಯ ಕಳಪೆ ಕಾಮಗಾರಿ ಯಿಂದಾಗಿ ನವಲೂರು ಬಳಿಯ ಸೇತುವೆ ಪಿಲ್ಲರ್ ಕ್ರ್ಯಾಕ್ ಬಿಟ್ಟಿದೆ. ಏನಾದರೂ ದೊಡ್ಡ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಹೈಕೋರ್ಟ್ ವಕೀಲರು ಆಗಿರುವ ಕಾಂಗ್ರೆಸ್ ಮುಖಂಡ ಪಿ.ಎಚ್.ನೀರಲಕೇರಿ ಕಿಡಿಕಾರಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಕರ್ಮಕಾಂಡವನ್ನು ಎಳೆ ಎಳೇಯಾಗಿ ಬಿಡಿಸಿಟ್ಟರು.
ಕಳಪೆ ಕಾಮಗಾರಿಯ ಲೋಪಗಳ ಬಗ್ಗೆ ಒಂದು ತಿಂಗಳೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಶಾಸಕರು ಕೇವಲ ಸಿಎಂಗೆ ದೂರು ನೀಡಿದರೆ ಸಾಲದು. ಇದರ ಸಮಗ್ರ ತನಿಖೆ ನಡೆಸಿ, ಕಾಮಗಾರಿಯಲ್ಲಿನ ಲೋಪಗಳನ್ನು ಸರಿಪಡಿಸುವ ತನಕ ಸಂಚಾರಕ್ಕೆ ಆಸ್ಪದ ನೀಡಬಾರದು ಎಂದರು.
ಯೋಜನೆ ಆರಂಭ ಆದ ದಿನದಿಂದ ಮುಗಿದ ದಿನದವರೆಗಿನ ಮಾಹಿತಿಯನ್ನು ಮಾಹಿತಿ ಹಕ್ಕಿನಡಿ ಕೇಳಿದರೂ ಬಿಆರ್ಟಿಎಸ್ ಅಧಿಕಾರಿಗಳು ಬಹುತೇಕ ಮಾಹಿತಿ ನೀಡುತ್ತಿಲ್ಲ.
ಯೋಜನೆಯ ಮೂಲ ನಕ್ಷೆ, ವಿಶ್ವಬ್ಯಾಂಕ್ ನೆರವು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನ, ಟೆಂಡರ್ ಪ್ರಕ್ರಿಯೆ ನಿರ್ವಹಣೆ, ನಿಲ್ದಾಣ ಇನ್ನಿತರ ಕಾಮಗಾರಿಗಳ ನಿರ್ಮಾಣ, ಬಸ್ ಖರೀದಿ ಸೇರಿದಂತೆ ಯೋಜನೆಯ ಕುರಿತು ಮಾಹಿತಿಯನ್ನು ಅಧಿಕಾರಿಗಳು ಸರಿಯಾಗಿ ನೀಡುತ್ತಿಲ್ಲ.
ಹೀಗಾಗಿ ಇಡೀ ಯೋಜನೆಯಲ್ಲಿ ಗೋಲ್ ಮಾಲ್ ನಡೆದಿರುವ ಶಂಕೆ ಇದೆ ಎಂದು ಗಂಭೀರವಾಗಿ ಆಪಾದಿಸಿದರು.
ಇನ್ನೊಂದೆಡೆ ಬಸ್ ಓಡಾಟ ಆರಂಭವಾದ ಬಳಿಕ ಅನೇಕ ರೀತಿಯಲ್ಲಿ ಅಡಚಣಿಯಾಗುತ್ತಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರಿಸಲಾಗುತ್ತಿದೆ.
ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಇದೀಗ ಕಾಮಗಾರಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ಆದರೆ, ಅವರ ಪಕ್ಷದ ಸರಕಾರ ಇದ್ದಾಗಲೂ ಯಾವುದೇ ಬೆಳವಣಿಗೆ ಆಗದಿರುವುದು ಖೇದಕರ ಸಂಗತಿಯಾಗಿದೆ.
ಮೂರು ತಿಂಗಳೊಳಗೆ ತನಿಖೆ ನಡೆಸಿ ವರದಿ ಕೊಡುವಂತೆ ಮುಖ್ಯಮಂತ್ರಿಗಳು ಸೂಚಿಸಿರುವುದರ ಬಗ್ಗೆ ನಮಗೆ ವಿಶ್ವಾಸವಿಲ್ಲ. ಇಡೀ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿನ ಲೋಪಗಳಿಗೆ ಯಾರು ಜವಾಬ್ದಾರಿ ಎಂದು ನೀರಲಕೇರಿ ಪ್ರಶ್ನಿಸಿದರು.
ನಿವೃತ್ತ ಇಂಜನೀಯರ ರವೀಂದ್ರ ಹೂಗಾರ, ಕಾಂಗ್ರೆಸ್ ಮುಖಂಡ ಅಕ್ಷಯ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.