ಬೆಂಗಳೂರು prajakiran.com : ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ವಿಚಾರಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ತಳಕು ಹಾಕುವುದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಂಗಳೂರು ಸಿಸಿಬಿ ವಿಚಾರಣೆ ವೇಳೆ ಹೊರ ಬಂದಿರುವ ಆ ಮಾಜಿ ಸಿಎಂ ಯಾರು ಹೇಳಿ. ಸರಕಾರಕ್ಕೆ ತಾಕತ್ ಇದ್ದರೆ ಅದನ್ನು ಬಹಿರಂಗಪಡಿಸಲಿ. ಅದನ್ನು ಬಿಟ್ಟು ದಾರಿ ತಪ್ಪಿಸುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ರಾಜ್ಯದ ಮೂರು ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರ ಮೇಲೆ ಒತ್ತಡ ತರುವ ಪ್ರಯತ್ನ ನಡೆದಿದೆ ಎಂದು ಹೇಳುವುದು ಸರಿಯಲ್ಲ. ಎರಡು ಬಾರಿ ಸಿಎಂ ಆಗಿ ಬದುಕಿರುವ ನಾನು, ಮಾಜಿ ಸಿಎಂ ಪುತ್ರ ಯಾರು ಎಂಬುದು ಗೊತ್ತಾಗಬೇಕು ಎಂದು ಅನುಶ್ರೀ ಲಿಂಕ್ ಬಗ್ಗೆ ಮಾಧ್ಯಮ ಸೃಷ್ಟಿಗೆ ಗರಂ ಆದರು.
ರಾಜ್ಯದ ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ,
ಎಸ್. ಎಂ. ಕೃಷ್ಣ, ಜಗದೀಶ ಶೆಟ್ಟರ್, ಸದಾನಂದ ಗೌಡ, ಸಿದ್ದರಾಮಯ್ಯ ಅವರು ಇದ್ದಾರೆ. ಅಲ್ಲದೆ, ಹಾಲಿ ಸಿಎಂ ಯಡಿಯೂರಪ್ಪ ಇದ್ದಾರೆ. ಅವರು ಇರಲಿಕ್ಕಿಲ್ಲ ಎಂದು ಭಾವಿಸಿದ್ದೇನೆ. ಹೀಗಾಗಿ ಮಾಜಿ ಸಿಎಂ ಯಾರು, ಅವರ ಹೆಸರು ಬಹಿರಂಗ ಪಡಿಸಿ, ಇಲ್ಲದಿದ್ದರೆ ಕಪೋಲ ಕಲ್ಪಿತ ವರದಿವಾಗಲಿದೆ. ಅದು ಆಗುವುದು ಬೇಡ ಎಂದರು.
ಆ ಹೆಣ್ಣು ಮಗಳು ಎನ್ ತಪ್ಪು ಮಾಡಿದ್ದಾರೆ. ನನಗೆ ಗೊತ್ತಿಲ್ಲ.ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಆ ತನಿಖೆಗೆ ನಾನು ಯಾವುದೇ ಪ್ರಭಾವ ಬಳಸಿಲ್ಲ. ನಾನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ವಿವಾದಕ್ಕೆ ತೆರೆ ಎಳೆದರು.
ಮಾಜಿ ಸಿಎಂ ಎಂದು ಹೇಳಿರುವ ಆ ಪೊಲೀಸ್ ಅಧಿಕಾರಿ ಯಾರು. ಅವರು ಯಾರಿಗೆ ಯಾರು ಕಾಲ್ ಮಾಡಿದ್ದರು ಎಂಬುದು ಸ್ಪಷ್ಟಪಡಿಸಬೇಕು. ಬೇಕಿದ್ದರೆ ಆ ಅಧಿಕಾರಿಯನ್ನು ವರ್ಗಾವಣೆ ಮಾಡಬಹುದು. ಅದು ಬಿಟ್ಟು ಸರಕಾರಕ್ಕೆ ಏನ್ ಮಾಡಲಿಕ್ಕೆ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ನಾನು ಈ ಮೊದಲೇ ಆ ಬಗ್ಗೆ ಎಚ್ಚರಿಸಿದ್ದೇನೆ. ಈಗ ಅದೇ ನಡೆಯುತ್ತಿದೆ. ಆ ಪೊಲೀಸ್ ಅಧಿಕಾರಿಯನ್ನು ಸರಕಾರ ವರ್ಗಾವಣೆ ಮಾಡಿತ್ತು. ಮತ್ತೀಗ ಅವರನ್ನು ಆ ಸ್ಥಾನಕ್ಕೆ ಮರಳಿ ತರಲಾಗಿದೆ ಎಂಬುದು ಮೇಲ್ನೋಟಕ್ಕೆ ಪ್ರಕರಣದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ನಿರ್ದಶನವಾಗಿದೆ ಎಂದು ಆರೋಪಿಸಿದರು.
ಅಲ್ಲದೆ, ನನ್ನ ಜೀವನದಲ್ಲಿ ರಾಜಕಾರಣಕ್ಕೆ ಬಂದ ದಿನದಿಂದ ಈವರೆಗೆ ನಾನು ಯಾವುದೇ ಕಾನೂನು ಬಾಹಿರ ಘಟನೆಗಳಿಗೆ ರಕ್ಷಣೆ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಕೂಡ ಆ ನಡೆ ಅನುಸರಿಸಲ್ಲ. ನಾನು ಅದರ ವಿರುದ್ದ ಧ್ವನಿ ಎತ್ತುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.