ಬೆಂಗಳೂರು prajakiran.com :
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೆ ಒಳಗಾಗಿ ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವ ಚಂದು ಮಾಮ ಅಲಿಯಾಸ್ ಚಂದ್ರಶೇಖರ ಇಂಡಿ ಜಾಮೀನು ಅರ್ಜಿ ವಜಾಗೊಂಡಿದೆ.
ಶುಕ್ರವಾರ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ (ಜನಪ್ರತಿನಿಧಿಗಳ ನ್ಯಾಯಾಲಯ) ಈ ಮಹತ್ವದ ಆದೇಶ ಹೊರಡಿಸಿದೆ
ನ್ಯಾಯಾಧೀಶರಾದ ಬಿ. ಜಯಂತಕುಮಾರ್ ಅವರು ಈ ಕುರಿತು ಸುದೀರ್ಘ ವಾದ ಪ್ರತಿವಾದ ಆಲಿಸಿದ ಬಳಿಕ ಈ ತೀರ್ಪು ಪ್ರಕಟಿಸಿದ್ದಾರೆ.
ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಚಂದ್ರಶೇಖರ್ ಇಂಡಿ ಪಿಸ್ತೂಲ್ ಪೂರೈಸಿದ್ದರು.
ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅದಕ್ಕೆ ಮಹತ್ವದ ಕಾರಣಗಳನ್ನು ನ್ಯಾಯಾಲಯ ಗಮನಿಸಿ, ಹತ್ತು ಹಲವು ಅಂಶಗಳನ್ನು ನಮೂದಿಸಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಕೂಡ ಸಿಬಿಐ ನಿಂದ ನ.5 _ರಂದು ಬಂಧನಕ್ಕೆ ಒಳಗಾಗಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದಾರೆ.
ಈ ಪ್ರಕರಣದಲ್ಲಿ ಅವರ ಸೋದರ ಮಾವ ಚಂದ್ರಶೇಖರ ಇಂಡಿ ಯೋಗೇಶ್ ಗೌಡ ಹತ್ಯೆ ಆರೋಪಿಗಳಿಗೆ ಪಿಸ್ತೂಲ್ ಪೂರೈಸಿದ ಆರೋಪದ ಮೇಲೆ ಬಂಧಿತನಾಗಿರುವುದು ಸಿಬಿಐ ತನಿಖೆ ವೇಳೆ ರಾಕೇಶ್ ರಂಜನ್ ನೇತೃತ್ವದ ಅಧಿಕಾರಿ ಗಳ ತಂಡ ಪತ್ತೆ ಮಾಡಿತ್ತು.
ಈತ ಭೀಮಾ ತೀರದ ಹಂತಕರ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ಹಾಗೂ ಅವರ ಬಳಿ ಪಿಸ್ತೂಲ್ ಪಡೆದು ಇವರಿಗೆ ಪೂರೈಸಿದ ಕುರಿತು ಭೀಮಾ ತೀರದ ಹಂತಕರು ಸಿಬಿಐ ಎದುರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.