ತೇಲಿಹೋದ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ಪರಿಹಾರ
ಧಾರವಾಡ prajakiran.com : ತುಪ್ಪರಿಹಳ್ಳದ ಪ್ರವಾಹದಲ್ಲಿ ತೇಲಿಹೋದ ಹಾರೋಬೆಳವಡಿಯ ರೈತ ಮಡಿವಾಳಪ್ಪ ಜಕ್ಕಣ್ಣವರ ಅವರ ತಂದೆ ನಾಗಪ್ಪ ಅವರಿಗೆ 5 ಲಕ್ಷ ಮೊತ್ತದ ಪರಿಹಾರದ ಚೆಕ್ ಅನ್ನು ಭಾನುವಾರ ಧಾರವಾಡ ಜಿಲ್ಲಾಡಳಿತ ಕೊನೆಗೂ ಹಸ್ತಾಂತರಿಸಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಿದೆ.
ತುಪರಿಹಳ್ಳದಲ್ಲಿ ಕೋಚ್ಚಿ ಹೋದ ರೈತ 56 ದಿನ ಕಳೆದರೂ ನಾಪತ್ತೆ, ಹಿರಿಯ ಜೀವಗಳ ಕಣ್ಣೀರು ಒರೆಸದ ಜಿಲ್ಲಾಡಳಿತ ಎಂದು ಈ ಕುರಿತು ಪ್ರಜಾಕಿರಣ.ಕಾಮ್ ಸಮಗ್ರ ವರದಿ ಪ್ರಕಟಿಸಿತ್ತು.
ಅಲ್ಲದೆ, ಮಳೆ ನಿಂತು ಹೋದ ಮೇಲೆ ಜಿಲ್ಲಾಡಳಿತ ರೈತರ ಜಮೀನುಗಳಿಗೆ ಭೇಟಿ ನೀಡಿ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಹಾನಿಯಾಗಿರುವ ಹೆಸರು, ಉದ್ದು, ಶೇಂಗಾ ಸೇರಿದಂತೆ ಇತರ ಬೆಳೆಗಳ ಹಾನಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಸರು ಬೆಳೆ ಹಾನಿಯ ಕುರಿತು ರೈತರ ಅಹವಾಲುಗಳನ್ನು ಆಲಿಸಿದರು. ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರಿಗೆ ಜನಪ್ರತಿನಿಧಿಗಳು ಸಾಥ್ ನೀಡಿದರು.
ಈ ಕುರಿತು ಮಂಗಳವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಬೆಳೆಹಾನಿ ,ಪರಿಹಾರ ಮತ್ತಿತರ ವಿಷಯಗಳ ಕುರಿತು ಚರ್ಚ ನಡೆಯಲಿರುವ ಹಿನ್ನಲೆಯಲ್ಲಿ ಈ ಭೇಟಿ ನೀಡಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದರು.
ಜೊತೆಗೆ ಹಿರಿಯ ರೈತ ಜೀವಗಳ ಕಣ್ಣೀರ ಕತೆಯನ್ನು ಬೆಳಕಿಗೆ ತಂದಿದ್ದರು.ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.