ಧಾರವಾಡ prajakiran.com : ಅತಿ ಕಡಿಮೆ ದರದಲ್ಲಿ ಕಳೆದ ಮೂರು ದಶಕಗಳಿಂದ ಹಳ್ಳಿಗರ ಸೇವೆ ಮಾಡುತ್ತಿರುವ ಹಳ್ಳಿಯ ಹಿರಿಯ ವೈದ್ಯರೊಬ್ಬರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಹೌದು ಇದು ಅಚ್ಚರಿಯಾದರೂ ಸತ್ಯ. ಧಾರವಾಡ ಜಿಲ್ಲೆಯ ಹೆಬ್ಬಿಳ್ಳಿಯ ಡಾ. ವೇದ ವ್ಯಾಸ ದೇಶಪಾಂಡೆ ಅವರೆ ಈ ಗರಿಗೆ ಪಾತ್ರರಾದ ವೈದ್ಯ.
ಡಾ.ವೇದವ್ಯಾಸ ದೇಶಪಾಂಡೆ 1974-75ರ ಸಂದರ್ಭದಲ್ಲಿ ಹುಬ್ಬಳ್ಳಿಯ ಕಿಮ್ಸ್ ಲ್ಲಿ ವೈದ್ಯಕೀಯ ಪದವಿ ಪಡೆದು,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ‘ಗ್ರಾಮೋತ್ಥಾನ’ ಪ್ರಕಲ್ಪದಿಂದ ಗ್ರಾಮೀಣ ಪ್ರದೇಶದಲ್ಲೆ ವೈದ್ಯಕೀಯ ಸೇವೆ ಆರಂಭಿಸಬೇಕೆಂಬ ದೀಕ್ಷೆ ಪಡೆದವರು.
ಹಲವು ಸವಾಲುಗಳನ್ನು ಎದುರಿಸಿಯೂ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯಲ್ಲಿ ವೈದ್ಯಕೀಯ ಸೇವೆ ನೀಡಿ ಗ್ರಾಮೀಣ ಜನರ ವಿಶ್ವಾಸ ಗಳಿಸಿದವರು.
ಹೆಬ್ಬಳ್ಳಿ ಸುತ್ತ ಮುತ್ತ ಇರುವ ಜನರಿಗೆ ಮಾತ್ರವಲ್ಲದೆ ಪಕ್ಕದ ಜಿಲ್ಲೆಗಳಾದ ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳ ಹಲವರಿಗೆ ದೇಶಪಾಂಡೆ ಡಾಕ್ಟರೇ ಬೇಕು.
ಈ ಕೋವಿಡ – 19 ಸಂದರ್ಭದಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಇತರ ವೈದ್ಯರು ಸೇವೆ ನಿಲ್ಲಿಸಿದಾಗಲೂ, ತಮ್ಮ ಸೇವೆ ಮುಂದುವರಿಸಿದ ಡಾಕ್ಟರು.
ಸ್ವತಃ ಕೋವಿಡ ಪಾಸಿಟಿವ್ ಆಗಿ ಗುಣಮುಖರಾಗಿ ಮತ್ತೆ ತಮ್ಮ ಸೇವೆ ಮುಂದುವರೆಸಿದ್ದಾರೆ.
ಇದೀಗ ಅವರ ಪುತ್ರ ಡಾ.ಗುರುಪ್ರಸಾದ ದೇಶಪಾಂಡೆ ಹೆಬ್ಬಳ್ಳಿಯ ಡಾ.ವೇದವ್ಯಾಸ ದೇಶಪಾಂಡೆಯವರ ಪುತ್ರ.
ಹುಬ್ಬಳ್ಳಿಯ ಕಿಮ್ಸ್ ಲ್ಲಿ ವೈದ್ಯಕೀಯ ಪದವಿ ಪಡೆದು, ಮೈಸೂರಿನ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇತ್ತೀಚೆಗೆ ಹೆಬ್ಬಳ್ಳಿಗೆ ವಾಪಾಸಾಗಿದ್ದಾರೆ.
ಅದೇ ಹಳ್ಳಿಯಲ್ಲಿ ತಮ್ಮ ವೈೈದ್ಯಕೀಯ ಸೇವೆ ಮುಂದುವರೆಸುವ ಮಹತ್ವದ ತೀರ್ಮಾನ ಕೈ ಗೊಂಡಿದ್ದಾರೆ.
ಡಾ.ವೇದವ್ಯಾಸ ದೇಶಪಾಂಡೆಯವರಿಗೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡಬೇಕೆಂಬ ಪ್ರೇರಣೆಯನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೀಡಿದರೆ, ಅವರ ಮಗ ಡಾ.ಗುರುಪ್ರಸಾದ ದೇಶಪಾಂಡೆಯವರಿಗೆ ಅವರ ಮನೆಯ ಸಂಸ್ಕಾರ ಈ ಪ್ರೇರಣೆ ನೀಡಿದೆ.