ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸಿಬಿಐ ತನಿಖೆ ಮತ್ತೆ ಚುರುಕುಗೊಂಡಿದೆ.
ಗುರುವಾರ ಬೆಳ್ಳಂ ಬೆಳಗ್ಗೆ ಪ್ರಮುಖ
ಆರೋಪಿ ಬಸವರಾಜ್ ಮುತ್ತಗಿಗೆ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿದ ಬಸವರಾಜ ಮುತ್ತಗಿಯನ್ನು ಸಿಬಿಐ ತೀವ್ರ ತನಿಖೆಗೆ ಒಳಪಡಿಸಿದೆ ಎನ್ನಲಾಗಿದೆ.
ಬಸವರಾಜ ಮುತ್ತಗಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ.
ಇದೇ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತರಾದ ಶ್ರೀ ಪಾಟೀಲ, ಬಾಪುಗೌಡ ಪಾಟೀಲ ಮಂಗಳಗಟ್ಟಿ, ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಕೂಡ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಸಿಬಿಐ ವಿಚಾರಣೆ ಎದುರಿಸಿದರು.
ಇದೇ ವೇಳೆ ಬಸವರಾಜ ಮುತ್ತಗಿ ಆಪ್ತ ಚಂದ್ರು ಪೂಜಾರ ಕೂಡ ಸಿಬಿಐ ತನಿಖೆಗೆ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ವಿಚಾರಣೆಗೆ ಹಾಜರಾದರು.
ಮೊದಲು ಪ್ರತ್ಯೇಕವಾಗಿ ಹಾಗೂ ಆನಂತರ ಹಲವರ ಮುಖಾಮುಖಿ ಮಾಡಿ ವಿಚಾರಣೆ ನಡೆಸಿದರು ಎಂದು ಹೇಳಲಾಗುತ್ತಿದೆ.
ಬಸವರಾಜ ಮುತ್ತಗಿ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆಯ ಮುಂಚೆ ಹಾಗೂ ನಂತರ ನಿರಂತರವಾಗಿ ಮಾಜಿ ಸಚಿವರ ಸಂಪರ್ಕ ಹೊಂದಿದ್ದ ಮಾಹಿತಿ ಸಿಬಿಐ ಕಲೆ ಹಾಕಿದೆ.
ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮ ಆಪ್ತರ ಮೊಬೈಲ್ ಪೋನ್ ಬಳಸಿ ಆರೋಪಿಗಳ ಜೊತೆಗೆ ಸಂಪರ್ಕ ಹೊಂದಿದ್ದರು.
ವಿವಿಧ ಕಂಪನಿಗಳ ಮೊಬೈಲ್ ಬಳಕೆ ಆಧಾರದ ಮೇಲೆ ಸಾವಿರಾರು ಕರೆಗಳು ಬಂದ ಜಾಡು ಹಿಡಿದು ಹಾಗೂ ವಿಶೇಷವಾಗಿ ಈ ಸಂಭಾಷಣೆಯ ಸುತ್ತ ಮುತ್ತ ಮತ್ತು ಮಹತ್ವದ ಮಾಹಿತಿ, ಸಾಕ್ಷ್ಯ ಆಧರಿಸಿ ಹತ್ತು ಹಲವು ಪ್ರಶ್ನೆಗಳನ್ನು ಬಸವರಾಜ ಮುತ್ತಗಿ ಮುಂದಿಟರು ಎಂದು ಹೇಳಲಾಗುತ್ತಿದೆ.
ಸಿಬಿಐನ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಬಸವರಾಜ ಮುತ್ತಗಿ ಕ್ಷಣಕಾಲ ಗಲಿಬಿಲಿಗೊಂಡರೂ, ಆ ಬಳಿಕ ಚೇತರಿಸಿಕೊಂಡು ಮತ್ತೆ ಉತ್ತರ ನೀಡುವ ಪ್ರಯತ್ನ ಮಾಡಿದರು.
ನಿನ್ನೆ ಯಷ್ಟೆ ಸಿಬಿಐ ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ನ್ಯಾಯಾಲಯದ ಮುಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮೊಬೈಲ್ ಫೋನ್ ಸಂಭಾಷಣೆಯ ಮಾಹಿತಿಯನ್ನು ನೀಡಿ ಜಾಮೀನು ನೀಡದಂತೆ ಮನವಿ ಮಾಡಿದ್ದರು.