ಹುಬ್ಬಳ್ಳಿ prajakiran.com : ಬೆಳಗಾವಿಯ ಯಮಕನಮರಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಸಿದ್ದ 4.9 ಕೆ.ಜಿ ಚಿನ್ನ ಕಳುವು ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.
ಮಂಗಳವಾರ ಚಿನ್ನ ಕಳವು ಪ್ರಕರಣದ ಕಿಂಗ್ ಪಿನ್ ಕಿರಣ್ ವೀರನಗೌಡ ಪಾಟೀಲನನ್ನು ಸಿಐಡಿ ಅಧಿಕಾರಿಗಳ ತಂಡ ಹುಬ್ಬಳ್ಳಿಯ ಅವರ ಮನೆಗೆ ಕರೆತಂದು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದರು ಎಂದು ತಿಳಿದುಬಂದಿದೆ.
ನಿನ್ನೆ ಆತನನ್ನು ಬಂಧಿಸಿ ಹದಿನಾಲ್ಕು ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ಪಡೆದ ಬೆನ್ನಲ್ಲೇ ಇಂದು ಹುಬ್ಬಳ್ಳಿಗೆ ಕರೆ ತಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಬಂಧಿತ ಕಿರಣ್ ವೀರನಗೌಡನನ್ನು ಹುಬ್ಬಳ್ಳಿಯ ಕೇಶ್ವಾಪುರದ ಶಿವಗಂಗಾ ಲೇಔಟ್ ನಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದ ಸಿಐಡಿ ಅಧಿಕಾರಿಗಳು ಆರೋಪಿ ಕಿರಣ್ ಹಾಗೂ ಆತನ ತಂದೆ ನಿವೃತ್ತ ಡಿಎಸ್ಪಿ ವೀರನಗೌಡರನ್ನು ವಿಚಾರಣೆ ನಡೆಸಿದರು ಎನ್ನಲಾಗಿದೆ.
ಕದ್ದಿರುವ ಚಿನ್ನ ಮನೆಯಲ್ಲೇ ಇಟ್ಟಿರುವ ಸಂಶಯದ ಮೇಲೆ ಮನೆಯನ್ನ ಶೋಧಿಸಿದ ಸಿಐಡಿ ತಂಡ ಸತತ ಒಂದೂವರೆ ಗಂಟೆಗಳ ಕಾಲ ಮನೆಯ ಇಂಚಿಚು ತಡಕಾಡಿದೆ ಎಂದು ತಿಳಿದುಬಂದಿದೆ.
ತನ್ನ ಅಕ್ರಮ, ಅವ್ಯವಹಾರಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಹಾಯ ಪಡೆದು ಕೋಟೆ ಕಟ್ಟಿ ಮರೆದಾಡಿದ್ದ ಕಿರಣ್ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ
ಸಿಬಿಐ ವಿಚಾರಣೆ ನಂತರ ಇದೇ ಮೊದಲ ಬಾರಿಗೆ ಕರ್ನಾಟಕ ಪೊಲೀಸರ (ಸಿಐಡಿ) ತನಿಖೆ ಎದುರಿಸುತ್ತಿದ್ದಾನೆ.
ಸಿಐಡಿ ವಿಚಾರಣೆ ವೇಳೆ ಆತನ ಹತ್ತು ಹಲವು ಕರಾಳ ಮುಖಗಳು ಅನಾವರಣಗೊಂಡಿವೆ ಎನ್ನಲಾಗಿದೆ.
ಹದಿನಾಲ್ಕು ದಿನಗಳಲ್ಲಿ ಸಿಐಡಿ ಅಧಿಕಾರಿಗಳ ತಂಡ ಇನ್ನೇನು ಮಹತ್ತರ ಮಾಹಿತಿಗಳನ್ನು ಬಯಲಿಗೆ ಎಳೆಯುತ್ತದೆ ಎಂಬುದು ಕಾದು ನೋಡಬೇಕಿದೆ.