ಧಾರವಾಡ prajakiran.com : 1989ರಿಂದ 1995ರವರೆಗೆ ಎರಡು ಅವಧಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ನಿರ್ವಹಿಸಿದ್ದ ಧಾರವಾಡದ ಪ್ರೊ. ಎಂ.ಐ. ಸವದತ್ತಿ (89) ಬುಧವಾರ ಬೆಳಗ್ಗೆ ವಿಧಿವಶರಾದರು.
ಅವರು ಧಾರವಾಡದ ನವೋದಯ ನಗರದ
ತಮ್ಮ ನಿವಾಸದಲ್ಲಿ ಬೆಳಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
ಸವದತ್ತಿ ಅವರು ಧಾರವಾಡದ ಅಮ್ಮಿನಬಾವಿಯಲ್ಲಿ 1932 ರಲ್ಲಿ ಜನಿಸಿ, ಕರ್ನಾಟಕ ಕಾಲೇಜ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಯೇ ಶಿಕ್ಷಣ ಪೂರೈಸಿ ಆನಂತರ ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುವ ಮೂಲಕ ನಾಡಿನ ಮನೆ ಮಾತಾಗಿದ್ದರು.
ಆ ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಭೌತಶಾಸ್ತ್ರ ವಿಭಾಗದಲ್ಲಿ ತಮ್ಮದೇ ಆದ ಜ್ಞಾನದ ಮೂಲಕ ನಾಡಿನೆಲ್ಲೆಡೆ ವಿಶಿಷ್ಟ ಛಾಪು ಮೂಡಿಸಿ ಅಪಾರ ಶಿಷ್ಯ ಬಳಗವನ್ನು ತಯಾರು ಮಾಡಿದ್ದರು.
ನಿವೃತ್ತರಾದ ಬಳಿಕ ನಾಡಿನೆಲ್ಲಡೆ ಸಾವಿರಾರು ಉಪನ್ಯಾಸ ನೀಡಿದ್ದಲ್ಲದೆ, ಹತ್ತು ಹಲವು ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು.
ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಜೀವಮಾನ ಸಾಧನೆಗಾಗಿ ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ಲಭಿಸಿತ್ತು.
ಭೌತಶಾಸ್ತ್ರದಲ್ಲಿ ಅಪಾರ ಸಂಶೋಧನೆ ನಡೆಸಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.