ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರ ಒಂದೇ ದಿನ 257 ಜನರಿಗೆ ಮಹಾಮಾರಿ ಕರೋನಾ ವಕ್ಕರಿಸಿದ್ದು, ಆ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆ ಆಗಿದೆ.
4320ರ ಪೈಕಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 1610 ಇದ್ದು, ಇಂದು ಒಂದೇ ದಿನ 106 ಜನ ಚೇತರಿಸಿಕೊಂಡಿದ್ದಾರೆ. ಇನ್ನುಳಿದ 2651 ಜನ ಸೋಂಕಿತರು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಾವಣಗೆರೆಯಲ್ಲಿ ಪಿ-4093 ಸೋಂಕಿತ 83 ವರ್ಷದ ವೃದ್ದೆ ಸಾವನ್ನಪ್ಪಿದ್ದರೆ, ಗದಗ ಜಿಲ್ಲೆಯ 4082 ಸೋಂಕಿತ 44 ವರ್ಷದ ಸೋಂಕಿತ ಪುರುಷ ಮಧುಮೇಹ ಹಾಗೂ ಇತರೆ ಸೋಂಕಿನಿಂದ ಬಳಲುತ್ತಿದ್ದರು.
ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದ ಪಿ-4220 ಹಾಗೂ 4317 ಸೋಂಕಿತ ಮಹಿಳೆಯರಿಬ್ಬರು ಸಾವನ್ನಪ್ಪಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 57ಕ್ಕೆ ಏರಿಕೆಯಾದಂತಾಗಿದೆ.
ಇಂದಿನ 257 ಕೇಸ್ ಗಳಲ್ಲಿ 145 ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಒಟ್ಟು 155 ಜನ ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದಲೇ ಬಂದವರಾಗಿದ್ದಾರೆ.
ಉಡುಪಿಯ 92 ಜನ ಮಹಾರಾಷ್ಟ್ರದಿಂದಲೇ ಬಂದವರಾಗಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ ಮಾಹಿತಿ ನೀಡಿದ್ದಾರೆ.
ಅದೇ ರೀತಿ ಇಂದು ವಿಜಯಪುರದಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 134ಕ್ಕೆ ಏರಿಕೆ ಆಗಿದೆ.
ಇಂದು ಕೂಡ ಉಡುಪಿಯಲ್ಲಿ ಕರೋನಾ ರಣಕೇಕೆ ಮುಂದುವರೆದಿದ್ದು, ಒಟ್ಟು 92 ಜನರಿಗೆ ತಗುಲಿದ್ದರೆ, ರಾಯಚೂರು ಜಿಲ್ಲೆಯೊಂದರಲ್ಲಿಯೇ ಒಟ್ಟು 88 ಜನರಿಗೆ ಕಾಣಿಸಿಕೊಂಡಿದೆ. ಮಂಡ್ಯದಲ್ಲಿ ಇಂದು 15 ಜನರಿಗೆ ಸೊಂಕು ಕಾಣಿಸಿಕೊಂಡಿದ್ದು, ಒಟ್ಟು 317ಕ್ಕೆ ಏರಿಕೆ ಆಗಿದೆ.
ಹಾಸನ 15, ದಾವಣಗೆರೆ 13, ಬೆಳಗಾವಿ 12, ಬೆಂಗಳೂರು 9, ದಕ್ಷಿಣ ಕನ್ನಡ 4, ಚಿಕ್ಕಬಳ್ಳಾಪುರ 2, ಗದಗ 2, ಮೈಸೂರು, ಬಳ್ಳಾರಿ, ತುಮಕೂರು, ಹಾವೇರಿಯಲ್ಲಿ ತಲಾ ಒಂದು ಸೋಂಕು ದೃಢಪಟ್ಟಿದೆ.