ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದಲ್ಲಿ ಬಿಜೆಪಿ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅಳವಡಿಸಿರುವ ಬೃಹತ್ ಕಟೌಟ್ ನಲ್ಲಿರುವ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಕಳ್ಳತನ ವಾಗಿದೆ. ದಯವಿಟ್ಟು ಅದನ್ನು ಹುಡುಕಿಕೊಡಿ ಎಂದು ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಆಗ್ರಹಿಸಿದರು.
ಅವರು ಧಾರವಾಡದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರಿಗೆ ಹಚ್ವಿ ಹುಡುಕಿದರೂ ಸಿಕ್ಕಿಲ್ಲ ಎಂದು ದೂರಿದರು.
ಈವರೆಗೆ ಕೊಳಚೆ ಪ್ರದೇಶದ ಜನರಿಗೆ ಹಕ್ಕು ಪತ್ರ ಕೊಟ್ಟಿಲ್ಲ. 7 ಸಾವಿರ ಜನರಿಗೆ ಮನೆ ಹಂಚಿರುವುದಾಗಿ ಹೇಳಿದ್ದಾರೆ.
ಅವು ಬಹುತೇಕ ಸರಕಾರಿ ,ನಿವೃತ್ತ ನೌಕರರಿಗೆ, ಬಿಜೆಪಿ ಕಾರ್ಯಕರ್ತ ರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯ ಮನೆಯನ್ನು ವಿತರಿಸಿದ್ದಾರೆ.
ಅದಕ್ಕೆ ಚಂದ್ರಕಾಂತ ಬೆಲ್ಲದ ನಗರ ಅಂತ ಹೆಸರಿಟ್ಟಿದ್ದಾರೆ. ಯಾವ ಸಭೆಯಲ್ಲಿ ನಿರ್ಣಯ ಮಾಡಿದ್ದಿರಿ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮಾಹಿತಿಯನ್ನು ಕೇಳಿದರೆ ಉತ್ತರ ಕೊಟ್ಟಿಲ್ಲ ಎಂದು ಆರೋಪಿಸಿದರು.
ನಗರಾಭಿವೃದ್ಧಿ ಇಲಾಖೆಯ ಪರವಾನಿಗೆ ಪಡೆದಿಲ್ಲ. 24 ಗಂಟೆಗಳ ಒಳಗೆ ಎಲ್ಲಾ ಬೃಹತ್ ನಾಮಫಲಕ ತೆರವುಗೊಳಿಸಬೇಕು.
ಅನಧಿಕೃತ ನಾಮಫಲಕ ಅಳವಡಿಸಿದ್ದಾರೆ.
ಅರವಿಂದ ನಗರ, ಚಂದ್ರಕಾಂತ ಬೆಲ್ಲದ ಮಾರ್ಗ ಎಂದು ನಾಮಫಲಕ ಅನಧಿಕೃತವಾಗಿ ಅಳವಡಿಸಿದ್ದಾರೆ ಎಂದು ಆರೋಪಿಸಿದರು.
ಅವುಗಳನ್ನು ತಕ್ಷಣ ತೆರವುಗೊಳಿಸಬೇಕು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ಸಾವಿರಾರು ರೈತರ ಬದುಕು ಹಸನಾಗಿದೆ ಎಂದು ಹತ್ತಾರು ಬಾಂದಾರ ಕಟ್ಟಿರುವುದಾಗಿ ಶಾಸಕ ಅರವಿಂದ ಬೆಲ್ಲದ ಹೇಳಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದ ಅವರು ತಡಸಿನಕೊಪ್ಪ, ಗಾಮನಗಟ್ಟಿ, ನವಲೂರ ಸೇರಿದಂತೆ ಅನೇಕ ಕಡೆ ಬಾಂದಾರಗಳಿಲ್ಲ. ಮೂರು ರಿಂದ ನಾಲ್ಕು ಕೋಟಿ ಖರ್ಚು ಎಲ್ಲಿಗೆ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ಅನ್ಯಾಯ ಆಗಿದೆ.
ಈ ಬಾರಿ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುವುದಾಗಿ ಹೇಳಿದ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಡಗಣನೆ ಆಗಿದೆ.
25 ವಾರ್ಡ್ ಹಿಂದುಳಿದಿರುವುದು ಕಂಡು ಬಂದಿದೆ. ಮೂರು ಬಾರಿ ಪೂಜೆ ಆದರೂ ಕಾಮಗಾರಿ ಪ್ರಾರಂಭಗೊಂಡಿಲ್ಲ.
ಕೆಲಸ ಆರಂಭಗೊಂಡಿದೆ ಎಂದು ಸುಳ್ಳು ಹೇಳುವುದು ಶಾಸಕರಿಗೆ ರೂಢಿಯಾಗಿದೆ. ನವನಗರದಲ್ಲಿ ಹದಿನೈದು ದಿನಗಳಿಗೊಮ್ಮೆ ನೀರು ಪೂರೈಕೆಯಿಂದ ಹಾಹಾಕಾರ ಉಂಟಾಗಿದೆ ಎಂದು ಗುರುರಾಜ ಹುಣಸಿಮರದ ಆರೋಪಿಸಿದರು.