ರಾಜ್ಯದ ಹಲವು ಜಿಲ್ಲೆಯ ಸಾವಿರಾರು ಯುವಕರಿಗೆ ಮೋಸ
ಐದು ಪ್ರಕರಣಗಳಿಗೆ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ರಾಘವೇಂದ್ರ ಕಟ್ಟಿ ನೇರವಾಗಿ ಮತ್ತು ಹಲವು ಏಜೆಂಟರ ಮೂಲಕ ಹಣ ಸಂಗ್ರಹ ಆರೋಪ
ದಶಕಗಳಿಂದ ಸರಕಾರದ ಹೆಸರಿನಲ್ಲಿ ವಂಚನೆ ದಂಧೆ ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರ
ಧಾರವಾಡ ಪ್ರಜಾಕಿರಣ.ಕಾಮ್ :
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರಿ ಕೊಡಿಸುವುದಾಗಿ ನಂಬಿಸಿ, ಸಾವಿರಾರು ಯುವಕರಿಂದ ಲಕ್ಷಗಟ್ಟಲೆ ಹಣ ಪಡೆದು ಇದೀಗ ಹಣವನ್ನು ಮರಳಿಸದೆ, ವಂಚನೆ ಮಾಡಿರುವ ಧಾರವಾಡದ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಲ್ಟನ್ಸಿಯ ರಾಘವೇಂದ್ರ ಕಟ್ಟಿ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಸಿ ಐ ಡಿ ತನಿಖೆಗೆ ನೀಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆಗ್ರಹಿಸಿದರು
ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಹಿಂದಿನ ಸರಕಾರದ ಅವಧಿಯಲ್ಲಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಧಾರವಾಡದ ಉಪನಗರ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣ ದಾಖಲಾಗಿವೆ.
ಆ ಪ್ರಕರಣ ಸಂಬಂಧ ರಾಘವೇಂದ್ರ ಕಟ್ಟಿಯನ್ನು ಅಂದು ಉಪನಗರ ಪೊಲೀಸರು ವಶಕ್ಕೆ ಪಡೆದುಕೊಂಡಾಗ ಎದೆ ನೋವು ನೆಪ ಹೇಳಿ ಹುಬ್ಬಳಿಯ ಕಿಮ್ಸ್ ಗೆ ದಾಖಲಾಗಿ ಆನಂತರ ನಿರೀಕ್ಷಣಾ ಜಾಮೀನು ಪಡೆದು ಬಳಿಕ ಹೈಕೋರ್ಟ್ ಮೊರೆ ಹೋಗಿ ಎಲ್ಲಾ ಪ್ರಕರಣಗಳಿಗೆ ವಿಚಾರಣೆ ನಡೆಸದಂತೆ ತಡೆಯಾಜ್ಞೆ ಪಡೆದಿದ್ದ. ಆನಂತರ ಹೈಕೋರ್ಟ್ ನಲ್ಲಿ ರಾಜಿ ಸಂಧಾನಕ್ಕೆ ಮುಂದಾಗಿದ್ದ. ಆನಂತರ ಪ್ರಕರಣ ಇರ್ತಥ್ಯಪಡೆಸಿಕೊಳ್ಳದಿರುವುದರಿಂದ ಆ ಅರ್ಜಿಯನ್ನು ಹೈಕೋರ್ಟ್ ಜೂನ್ 7ರಂದು ವಜಾಗೊಳಿಸಿದೆ. ಆದರೆ ಈವರೆಗೆ ವಿಚಾರಣೆ ಆರಂಭಿಸಿಲ್ಲ. ಇದಾದ ಬಳಿಕ ಹಲವರು ಪ್ರಕರಣ ದಾಖಲಿಸಲು ಪ್ರಯತ್ನಿಸಿದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ.
ಈ ಪ್ರಕರಣದಲ್ಲಿ ಉಪನಗರ ಪೊಲೀಸರು ಮೀನಾಮೇಷ ಎಣಿಸುತ್ತಿರುವುದರಿಂದ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಸಿ ಐ ಡಿ ತನಿಖೆ ಗೆ ನೀಡಲೇಬೇಕು ಎಂದು ಒತ್ತಾಯಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದರ ಫ್ರಾಂಚೈಸಿ ತೆರೆದು ಅದರ ಮೂಲಕ ಹಾಗೂ ತಮ್ಮ ಹತ್ತಾರು ಎಜೆಂಟ್ ಗಳ ಮೂಲಕ ಕೋಟ್ಯಾಂತರ ರೂಪಾಯಿ ಸಂಗ್ರಹಿಸಲಾಗಿದೆ. ಈಗ ಎಜೆಂಟ್ ಗಳಾದ ಪ್ರೇಮಾ ಹಾಗೂ ಉಮೇಶ ಕಳಸದ ಸೇರಿದಂತೆ ಹಲವಾರು ಜನ ನಮಗೆ ನ್ಯಾಯ ಕೊಡಿಸುವಂತೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆಗೆದು ದೂರುಗಳನ್ನು ಸ್ವೀಕರಿಸಬೇಕು. ಮಂಗಳೂರು, ಗದಗ, ಹಾವೇರಿ, ವಿಜಯಪುರ,ಕಲಬುರಗಿ, ಬಾಗಲಕೋಟ ಜಿಲ್ಲೆಯ ಅನೇಕರು ದೂರು ನೀಡಲು ಸಿದ್ದರಿದ್ದಾರೆ. ಯಾರಿಗೆ ದೂರು ನೀಡಲು ಪರದಾಡುತ್ತಿದ್ದಾರೆ. ಧಾರವಾಡ ಉಪನಗರ ಪೊಲೀಸರು ಅವರನ್ನು
ಸಾಗ ಹಾಕುತ್ತಿದ್ದಾರೆ ಎಂದರು.
ಅನೇಕರಿಗೆ ಪ್ರಕರಣದ ತಡೆಯಾಜ್ಞೆ ಇದೆ ಎಂದು ದೂರು ಸ್ವೀಕರಿಸದೆ ವಾಪಾಸ್ ಕಳುಹಿಸಿದರೆ ಇನ್ನು ಕೆಲವರಿಗೆ ಹಣ ಮರಳಿಸಿ ಪ್ರಕರಣ ಬಿ ಫಾಲ್ಸ್ ಮಾಡಿಸಿದ್ದಾರೆ. ಹೀಗಾಗಿ ನಮಗೆ ಸ್ಥಳೀಯ ಪೊಲೀಸರ ಮೇಲೆ ವಿಶ್ವಾಸ ಉಳಿದಿಲ್ಲ. ಹಣ ಕಳೆದುಕೊಂಡು ಅನ್ಯಾಯವಾದವರ ಮೇಲೆಯೇ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದ ಸಿಐಡಿ ತನಿಖೆ ನಡೆಸಿ ಅವರ ಕೋಟ್ಯಾಂತರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನೊಂದವರಿಗೆ ನ್ಯಾಯಕೊಡಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಸರಕಾರಕ್ಕೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ನೊಂದ ಅರ್ಭ್ಯರ್ಥಿಗಳಾದ ಶಿವರಾಜ್, ವೆಂಕಟೇಶ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.